ADVERTISEMENT

ಟಟ್ರಾ ವಿವಾದ: ಬಿಇಎಂಎಲ್ ಅಧ್ಯಕ್ಷರ ನಿವಾಸದಲ್ಲಿ ಶೋಧ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 19:30 IST
Last Updated 19 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ):  ತಮಿಳುನಾಡು ಮೂಲದ ಅಸ್ಟ್ರಾಲ್ ಕನ್ಸಲ್ಟನ್ಸಿ ಸಂಸ್ಥೆ  ಬಾಡಿಗೆ ಪಡೆಯುವ ಗುತ್ತಿಗೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಬಿಐ, ಗುರುವಾರ ಭಾರತ್ ಅರ್ಥ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಅಧ್ಯಕ್ಷ ವಿ.ಆರ್.ಎಸ್. ನಟರಾಜನ್ ಸೇರಿದಂತೆ ಹಲವು ಅಧಿಕಾರಿಗಳ ನಿವಾಸದಲ್ಲಿ ಶೋಧ ನಡೆಸಿತು.

ಬೆಂಗಳೂರು, ಕೊಯಿಮತ್ತೂರು ಸೇರಿದಂತೆ ದೇಶದ ಹಲವೆಡೆ ಏಕಕಾಲಕ್ಕೆ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸಿದ ಸಂಸ್ಥೆ, ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಬೆಂಗಳೂರಿನಲ್ಲಿರುವ ನಟರಾಜನ್ ಅವರ ನಿವಾಸದ ಮೇಲೆ ಗುರುವಾರ ಬೆಳಗಿನ ಜಾವ ದಾಳಿ ನಡೆಸಿದ ಅಧಿಕಾರಿಗಳ ತಂಡ ಕಡತ ಮತ್ತು ದಾಖಲೆಗಳಿಗಾಗಿ ಜಾಲಾಡಿತು. ದಾಳಿ ವೇಳೆ ಅನೇಕ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಅಲ್ಲದೆ, ಸೇನೆಗಾಗಿ ಟಟ್ರಾ ಟ್ರಕ್‌ಗಳ ಆಮದಿನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನಟರಾಜನ್ ಹಾಗೂ ಅಸ್ಟ್ರಾಲ್‌ನ ನಿರ್ದೇಶಕ ಸಿ.ಎಸ್.ಶ್ರೀವತ್ಸನ್ ಅವರ ವಿರುದ್ಧ ವಂಚನೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ  ಪ್ರಕರಣ ದಾಖಲಿಸಿಕೊಂಡಿದೆ.

ಟಟ್ರಾ ಟ್ರಕ್ ಪೂರೈಕೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬುಧವಾರ ಇಬ್ಬರು ನಿವೃತ್ತ ಸೇನಾ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸಿದ್ದ ಸಿಬಿಐ, ನಟರಾಜನ್ ಮತ್ತು ವೆಕ್ಟ್ರಾ ಅಧ್ಯಕ್ಷ ರವೀಂದ್ರ ರಿಶಿ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಈ ವೇಳೆ ಪ್ರಮುಖ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿತ್ತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.