ADVERTISEMENT

ಟಿಂಡರ್ ಡೇಟಿಂಗ್ ಆ್ಯಪ್ ಮೂಲಕ ಜನರಿಗೆ ಪಂಗನಾಮ ಹಾಕಿ ದುಷ್ಕೃತ್ಯದಲ್ಲಿ ತೊಡಗಿದ್ದ ಯುವತಿಯ ಬಂಧನ

ಏಜೆನ್ಸೀಸ್
Published 7 ಮೇ 2018, 10:56 IST
Last Updated 7 ಮೇ 2018, 10:56 IST

ಜೈಪುರ: ಟಿಂಡರ್ ಡೇಟಿಂಗ್ ಅಪ್ಲಿಕೇಶನ್ ಬಳಸಿ ಸತತ ಆರು ವರ್ಷಗಳಿಂದ ಜನರಿಗೆ ಪಂಗನಾಮ ಹಾಕಿ ಹಣ ಸಂಗ್ರಹಿಸುತ್ತಿದ್ದ ಹಾಗೂ ಇನ್ನಿತರ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿದ್ದ ಯುವತಿ(27) ಮತ್ತು ಆಕೆಯ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಿಯಾ ಸೇತಿ ಬಂಧಿತ ಯುವತಿ. ಈಕೆ ಪಾಲಿಯಲ್ಲಿರುವ ಸರ್ಕಾರಿ ಕಾಲೇಜಿನ ಉಪನ್ಯಾಸಕನ ಮಗಳು. ವಿದ್ಯಾಭ್ಯಾಸದ ಕಾರಣ ಜೈಪುರಕ್ಕೆ ಬಂದಿದ್ದಳು.

ಈಕೆ ಪ್ರಿಯಕರ ದೀಕ್ಷಾಂತ್ ಕಮ್ರಾ ಹಾಗೂ ಈತನ ಸ್ನೇಹಿತ ಲಕ್ಷ್ಯ ವಾಲಿಯಾ ಜತೆ ಸೇರಿಕೊಂಡು ಹಣ ಸುಲಿಗೆ, ಎಟಿಎಮ್ ಕಳ್ಳತನ, ಕೊಲೆ ಇಂತಹ ದುಷ್ಕೃತ್ಯಗಳಲ್ಲಿ ಲೀಲಾಜಾಲವಾಗಿ ತೊಡಗಿದ್ದಳು. 

ADVERTISEMENT

ಇವರೆಲ್ಲರನ್ನು ಮೇ 4ರಂದು ಬಂಧಿಸಿದ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ವೇಳೆ ಜೈಪುರದ ಉದ್ಯಮಿ ದುಶ್ಯಂತ್ ಶರ್ಮನನ್ನು ಕೊಲೆ ಮಾಡಿರುವುದಾಗಿಯೂ ಬಾಯಿ ಬಿಟ್ಟಿದ್ದಾರೆ.

ಟಿಂಡರ್ ಆ್ಯಪ್ ಮತ್ತು ಕೊಲೆ
ಆರೋಪಿ ಪ್ರಿಯಾ ಟಿಂಡರ್ ಆ್ಯಪ್ ಮೂಲಕ ಜೈಪುರದ ಉದ್ಯಮಿ ದುಶ್ಯಂತ್ ಶರ್ಮನನ್ನು ಸ್ನೇಹಿತನನ್ನಾಗಿ ಮಾಡಿಕೊಂಡಿದ್ದಳು. ಆತನ ಬಳಿ ಹಣ ಕೀಳುವುದೇ ಆಕೆಯ ಉದ್ದೇಶವಾಗಿತ್ತು. ಹಾಗಾಗಿ ಆತನನ್ನು ಮೇ 2ರಂದು ಮನೆಗೆ ಕರೆಸಿಕೊಂಡಿದ್ದಳು. ಆದರೆ ಮನೆಗೆ ಬಂದಾಗ ಆತನ ಬಳಿ ಸಾಕಷ್ಟು ಹಣ ಇಲ್ಲದಿರುವುದು ತಿಳಿದು ಬಂದಿತು. ಈತನನ್ನು ಹೀಗೆ ಬಿಟ್ಟರೆ ಎಲ್ಲಾ ಸತ್ಯಗಳನ್ನು ಹೊರಗಡೆ ಬಹಿರಂಗ ಪಡಿಸುತ್ತಾನೆ ಎಂಬ ಉದ್ದೇಶದಿಂದ ಈ ವೇಳೆ ಅಲ್ಲೇ ಇದ್ದ ಪ್ರಿಯಕರ ದೀಕ್ಷಾಂತ್ ಕಮ್ರಾ, ಲಕ್ಷ್ಯ ವಾಲಿಯಾ ಜತೆ ಸೇರಿ ಉದ್ಯಮಿಯನ್ನು ಕೊಲೆ ಮಾಡಿದ್ದರು. ಬಳಿಕ ಆತನ ತಂದೆಗೆ ಕರೆ ಮಾಡಿ 10ಲಕ್ಷ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದರು. ನಂತರ ಮೃತದೇಹವನ್ನು ಸೂಟ್‌ಕೇಸ್‌ಗೆ ಹಾಕಿ ಅಮೇರ್‌ ಎಂಬಲ್ಲಿ ಬಿಸಾಡಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.