ಹೈದರಾಬಾದ್: ತೆಲಂಗಾಣದಲ್ಲಿ ಕೆ. ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿಯೊಂದಿಗೆ (ಟಿಆರ್ಎಸ್) ಮೈತ್ರಿ ಮಾಡಿಕೊಳ್ಳುವ ಬಗ್ಗೆ ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಹಾಗೂ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಸುಳಿವು ನೀಡಿದ್ದಾರೆ.
ಪಕ್ಷದ ಮುಖ್ಯ ಕಚೇರಿ ಎನ್ಟಿಆರ್ ಟ್ರಸ್ಟ್ ಭವನದಲ್ಲಿ ನಡೆದ ಸನ್ಮಾನ ಕಾರ್ಯಕ್ರಮವೊಂದರಲ್ಲಿ ಈ ಕುರಿತು ಬುಧವಾರ ಅವರು ಮಾತನಾಡಿದ್ದಾರೆ.
‘ತೆಲಂಗಾಣದಲ್ಲಿ ನಾವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ. ಆದರೆ, ಅಲ್ಲಿನ ಮುಂದಿನ ವಿಧಾನಸಭಾ ಚುನಾವಣೆಯನ್ನು ಸ್ವಂತ ಶಕ್ತಿಯ ಮೇಲೆ ಎದುರಿಸಲಿದ್ದೇವೆ ಎಂದು ಬಿಜೆಪಿ ಈಗಾಗಲೇ ಸ್ಪಷ್ಟಪಡಿಸಿದೆ. ಈಗ ನಮ್ಮ ಮುಂದೆ ಇರುವ ಆಯ್ಕೆಗಳು ಅವೈಜ್ಞಾನಿಕವಾಗಿ ರಾಜ್ಯ ವಿಭಜಿಸಿದ ಕಾಂಗ್ರೆಸ್ ಹಾಗೂ ಪ್ರತ್ಯೇಕ ತೆಲಂಗಾಣಕ್ಕಾಗಿ ಪ್ರಾಮಾಣಿಕ ಹೋರಾಟ ಮಾಡಿದ ಟಿಆರ್ಎಸ್’ ಎಂದು ಅವರು ಹೇಳಿದ್ದಾರೆ.
‘ತೆಲಂಗಾಣದಲ್ಲಿ ಟಿಡಿಪಿಯ ಸಂಘಟನೆ ಬಲವಾಗಿದೆ. ಅದೇ ನಮ್ಮ ಶಕ್ತಿ. ಆದ್ದರಿಂದ ಅಲ್ಲಿ ನಮ್ಮ ಪಕ್ಷದ ನಿರ್ಮೂಲನೆ ಸಾಧ್ಯವಿಲ್ಲ’ ಎಂದರು.
ಆಂಧ್ರಪ್ರದೇಶದಲ್ಲಿ ಬಿಜೆಪಿ ಮತ್ತು ಜನಸೇನಾ ಪಕ್ಷಗಳೊಂದಿಗೆ ಟಿಡಿಪಿಯು ಮೈತ್ರಿ ಮಾಡಿಕೊಂಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಎರಡೂ ಮಿತ್ರಪಕ್ಷಗಳೊಂದಿಗೆ ಆರಂಭವಾಗಿರುವ ಪಕ್ಷದ ಸಂಘರ್ಷ, ನಾಯ್ಡು ಅವರಿಗೆ ತಲೆನೋವಾಗಿ ಪರಿಣಮಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.