ADVERTISEMENT

ಟಿಆರ್‌ಎಸ್ ಅಧ್ಯಕ್ಷರಿಂದ ವಿವಾದಾತ್ಮಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 11:06 IST
Last Updated 3 ಆಗಸ್ಟ್ 2013, 11:06 IST

ಹೈದರಾಬಾದ್ (ಪಿಟಿಐ): `ಪ್ರತ್ಯೇಕ ತೆಲಂಗಾಣ' ಕಿಚ್ಚು ಎಲ್ಲೆಡೆ ಹೊತ್ತಿ ಉರಿಯುತ್ತಿರುವ ನಡುವೆಯೇ, ತೆಲಂಗಾಣ ರಚನೆಯ ನಂತರ ತೆಲಂಗಾಣೇತರ ಸರ್ಕಾರಿ ನೌಕರರು ಆಂಧ್ರಕ್ಕೆ ಹಿಂದಿರುಗಿ ಹೋಗಬೇಕು ಎಂದು ಟಿಆರ್‌ಎಸ್ ಅಧ್ಯಕ್ಷ ಕೆ.ಚಂದ್ರಶೇಖರ್ ರಾವ್ ಅವರು ಶನಿವಾರ ಹೇಳುವ ಮೂಲಕ ವಿವಾದದ ತಿದಿ ಒತ್ತಿದ್ದಾರೆ.

ತೆಲಂಗಾಣ ಬೆಂಬಲಿತ ನೌಕರರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಚಂದ್ರಶೇಖರ್ ಅವರು `ಖಂಡಿತ, ಅವರು (ತೆಲಂಗಾಣೇತರ ಪ್ರಾಂತ್ಯಗಳ ನೌಕರರು) ಆಂಧ್ರ ಸರ್ಕಾರಕ್ಕೆ ಹೋಗಬೇಕು. ಬೇರೆ ಆಯ್ಕೆ ಇಲ್ಲ. ಆಂಧ್ರದಲ್ಲೂ ಕೂಡ ಸರ್ಕಾರವಿದೆ. ಆ ಭಾಗದ ಜನರು ಆ ಸರ್ಕಾರದಲ್ಲಿಯೇ ಕೆಲಸ ನಿರ್ವಹಿಸಲಿ ಮತ್ತು ನಮ್ಮ ನೌಕರರು ನಮ್ಮ ಸರ್ಕಾರದಲ್ಲಿ ಕೆಲಸ ಮಾಡಲಿ' ಎಂದು ಹೇಳಿದರು.

`ಅವರು ಹಿಂದಿರುಗಿ ಹೋಗುವುದರಿಂದ ನಮ್ಮ ಜನರು ಬಡ್ತಿ ಹೊಂದುಬಹುದು. ಹೊಂದಾಣಿಕೆ ಮಾಡಿಕೊಳ್ಳಬಹುದು. ಜತೆಗೆ ಕೆಳವರ್ಗದಲ್ಲಿರುವ ಖಾಲಿ ಹುದ್ದೆಗಳನ್ನು ತುಂಬಬಹುದು' ಎಂದು ರಾವ್ ತಿಳಿಸಿದರು.

ಏತನ್ಮಧ್ಯೆ, ರಾವ್ ಅವರ ಹೇಳಿಕೆ ಖಂಡಿಸಿರುವ ಟಿಡಿಪಿ ಸಂಸದ ನಮ ನಾಗೇಶ್ವರ ರಾವ್ ಅವರು `ತೆಲಂಗಾಣವೇನು ಟಿಆರ್‌ಎಸ್ ಅಧ್ಯಕ್ಷರ `ಅಧಿಕಾರ ಕ್ಷೇತ್ರ'ವಲ್ಲ' ಎಂದು ತಿರುಗೇಟು ನೀಡಿದ್ದಾರೆ.

ಈ ನಡುವೆ ಟಿಆರ್‌ಎಸ್‌ನ ಮಾಜಿ ಸಂಸದ ಹಾಗೂ ಹಿರಿಯ ಮುಖಂಡ ವಿನೋದ ಕುಮಾರ್ ಅವರು ಚಂದ್ರಶೇಖರ್ ರಾವ್ ಅವರ ಹೇಳಿಕೆ ಪ್ರತ್ಯೇಕ ರಾಜ್ಯ ನಂತರದ ಬೆಳವಣಿಗೆಗೆ ಸಂಬಂಧಿಸಿದಾಗಿದೆ ಎಂದು ಹೇಳಿದರೆ, ಆರ್‌ಎಸ್‌ನ ಶಾಸಕ ಟಿ ಹರೀಶ್ ರಾವ್ ಅವರು ಪಕ್ಷದ ಅಧ್ಯಕ್ಷರಿಂದ ಇದೊಂದು ಅಗತ್ಯವಿಲ್ಲದ ವಿವಾದಾತ್ಮಕ ಹೇಳಿಕೆಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.