ನವದೆಹಲಿ (ಪಿಟಿಐ): `ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶದಲ್ಲಿ ನಿರೀಕ್ಷಿತ ಸುಧಾರಣೆ ತರಲು ವಿಫಲರಾಗಿದ್ದಾರೆ~ ಎಂದು `ಟೈಮ್~ ಪತ್ರಿಕೆ ಮಾಡಿರುವ ಟೀಕೆಗೆ ಕಾಂಗ್ರೆಸ್ ಎದಿರೇಟು ನೀಡಿದೆ.
`ಕಳೆದ 8 ವರ್ಷಗಳಲ್ಲಿ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ರಾಜಕೀಯ ಸ್ಥಿರತೆ, ಸಾಮಾಜಿಕ ಸೌಹಾರ್ದ ಮೂಡಿಸಿದೆ. ಆಂತರಿಕ ಒಗ್ಗಟ್ಟು, ಹಾಗೂ ಆರ್ಥಿಕ ಪ್ರಗತಿ ಸಾಧಿಸಿದೆ. ಅಲ್ಲದೇ ಜಾಗತಿಕ ವ್ಯವಹಾರದಲ್ಲಿ ಮಹತ್ವದ ಪಾತ್ರ ವಹಿಸಿದೆ~ ಎಂದು ಪಕ್ಷದ ವಕ್ತಾರ ಮನೀಷ್ ತಿವಾರಿ ಪ್ರತಿಕ್ರಿಯಿಸಿದ್ದಾರೆ.
ಸ್ಪಷ್ಟ ವ್ಯತ್ಯಾಸ: `ಟೈಮ್~ ಪತ್ರಿಕೆಯು ಪ್ರಧಾನಿ ಸಿಂಗ್ ಅವರನ್ನು ನೋಡಿದ್ದಕ್ಕೂ, ಕೆಲವು ಸಮಯದ ಹಿಂದೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ನೋಡಿದಕ್ಕೂ `ಸ್ಪಷ್ಟ ವ್ಯತ್ಯಾಸ~ ಕಾಣುತ್ತದೆ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.
`ಮೋದಿ ಅವರು ಅಭಿವೃದ್ಧಿ, ಭದ್ರತೆ, ಮೂಲಸೌಕರ್ಯ ಅಭಿವೃದ್ಧಿ, ದೇಶದ ಪ್ರಗತಿಯ ಸಂದೇಶ ಸಾರಿದ್ದಾರೆ ಎಂದು ಪತ್ರಿಕೆ ಬಣ್ಣಿಸಿತ್ತು. ಆದರೆ ಪ್ರಧಾನಿ ವಿಷಯದಲ್ಲಿ ಅದು ಟೀಕೆ ವ್ಯಕ್ತಪಡಿಸಿದೆ. ಸಿಂಗ್ ಅವರು ಭ್ರಮನಿರಸನ, ಭ್ರಷ್ಟಾಚಾರ, ನಾಯಕನಿಲ್ಲದ ಅರ್ಥವ್ಯವಸ್ಥೆ, ಹತಾಶೆ ಹಾಗೂ ರೂಪಾಯಿ ಮೌಲ್ಯ ಕುಸಿತದ ಸಂದೇಶ ಸಾರಿದ್ದಾಗಿ ಪತ್ರಿಕೆ ವಿಮರ್ಶಿಸಿದೆ~ ಎಂದು ಬಿಜೆಪಿ ನಾಯಕ ತರುಣ್ ವಿಜಯ್ ಹೇಳಿದ್ದಾರೆ.
ಆದರೆ ಸಿಂಗ್ ಹಾಗೂ ಮೋದಿ ನಡುವಿನ ಈ ಹೋಲಿಕೆಗೆ ಪ್ರತಿಕ್ರಿಯಿಸಲು ಕಾಂಗ್ರೆಸ್ ವಕ್ತಾರರು ನಿರಾಕರಿಸಿದ್ದಾರೆ. `ನಮಗೆ ಪ್ರಧಾನಿ ಸಿಂಗ್ ಹಾಗೂ ಮೋದಿ ಅವರನ್ನು ಹೋಲಿಸುವ ಉದ್ದೇಶ ಇಲ್ಲ~ ಎಂದು ಹೆಸರು ಹೇಳಲು ಇಚ್ಛಿಸದ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.