ಮುಂಬೈ (ಪಿಟಿಐ): ಶನಿವಾರ ನಿಧನರಾದ ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಅಂತಿಮ ಕ್ರಿಯೆಯಲ್ಲಿ ಭಾಗವಹಿಸಲು ಭಾನುವಾರ ಮುಂಬೈ ಸೇರಿದಂತೆ ದೇಶದ ವಿವಿಧೆಡೆಯಿಂದ ಲಕ್ಷಾಂತರ ಅಭಿಮಾನಿಗಳು ಭಾಗವಹಿಸಿ `ಮಹಾರಾಷ್ಟ್ರದ ಹುಲಿ~ಗೆ ಅಂತಿಮ ನಮನ ಸಲ್ಲಿಸಿದರು.
ಠಾಕ್ರೆ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳಲು ಮುಂಬೈ ನಗರದ ಗಲ್ಲಿ ಗಲ್ಲಿಗಳಲ್ಲಿನ ಜನರು ಸ್ವ-ಇಚ್ಚೆಯಿಂದ ತಮ್ಮ ನಿತ್ಯದ ಕಾರ್ಯಗಳನ್ನು ಸ್ಥಗಿತಗೊಳಿಸಿ, ಠಾಕ್ರೆಯವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡರು.
ಈ ಸಮಯದಲ್ಲಿ ಮುಂಬೈ ನಗರವು ಬಹುತೇಕ ಸ್ಥಬ್ಧಗೊಂಡಿತ್ತು. ಅಂಗಡಿ, ಮಾರುಕಟ್ಟೆ ಹಾಗೂ ಟ್ಯಾಕ್ಸಿ , ಆಟೋ ಸೇರಿದಂತೆ ಸ್ಥಳೀಯ ಸಾರಿಗೆ ವ್ಯವಸ್ಥೆಯು ಸಂಪೂರ್ಣ ಸ್ಥಗಿತಗೊಂಡಿತ್ತು. ನಗರದ ಪ್ರಮುಖ ರಸ್ತೆಗಳು ಜನದಟ್ಟಣೆ ಇಲ್ಲದೆ ಬಿಕೋ ಎನ್ನುತ್ತಿದ್ದವು.
ಶನಿವಾರ ಬಾಂದ್ರಾ ಉಪನಗರದಲ್ಲಿನ `ಮಾತೋಶ್ರೀ~ ನಿವಾಸದಲ್ಲಿ ಮೃತರಾದ ಬಾಳಾ ಸಾಹೇಬ್ ಠಾಕ್ರೆ ಅವರ ಪಾರ್ಥಿವ ಶರೀರವನ್ನು ಹೂವಿನ ಅಲಂಕಾರದೊಂದಿಗೆ ಭಾನುವಾರ ಬೆಳಿಗ್ಗೆ ಹೊರತಂದು, ಇಲ್ಲಿನ ಶಿವಾಜಿ ಪಾರ್ಕ್ನಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಅನುಕೂಲ ಮಾಡಿಕೊಡಲಾಯಿತು. ಅಂತ್ಯ ಸಂಸ್ಕಾರವನ್ನು ಸಂಜೆ 6 ಗಂಟೆಯ ವೇಳಗೆ ಇಲ್ಲಿನ ಶಿವಾಜಿ ಪಾರ್ಕ್ನಲ್ಲಿ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಅಂತಿಮ ಕ್ರಿಯೆಯಲ್ಲಿ ಭಾಗವಹಿಸಲು ಶಿವಸೇನಾ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ಬಾಲಿವುಡ್ ನಟ, ನಟಿಯರು, ರಾಜಕಾರಣಿಗಳು ಸೇರಿದಂತೆ ಲಕ್ಷಾಂತರು ಜನರು ಶಿವಾಜಿ ಪಾರ್ಕ್ನೆಡೆಗೆ ಹೆಜ್ಜೆ ಹಾಕಿದ್ದಾರೆ.
~ಈಗಾಗಲೇ ಮುಂಬೈ ನಗರದಲ್ಲಿಯೇ ಸುಮಾರು 20 ಸಾವಿರಕ್ಕೂ ಅಧಿಕ ಪೋಲಿಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನೇಮಿಸಲಾಗಿದೆ. `ಮಾತೋಶ್ರೀ~ ಹಾಗೂ ಶಿವಾಜಿ ಪಾರ್ಕ್ಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಅದರಲ್ಲಿಯೂ ಶಿವಾಜಿ ಪಾರ್ಕ್ನಲ್ಲಿಯೇ ಸಾವಿರಕ್ಕೂ ಅಧಿಕ ಪೋಲಿಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನೇಮಿಸಲಾಗಿದೆ~ ಎಂದು ಹಿರಿಯ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಾತೋಶ್ರೀ ಹಾಗೂ ಶಿವಾಜಿ ಪಾರ್ಕ್ ಸುತ್ತಲು ಬಿಗಿ ಭದ್ರತೆಯನ್ನು ಮಾಡಲಾಗಿದ್ದು, ಈ ಭಾಗದ ಸುತ್ತಲೂ ಗಾಡಿಗಳನ್ನು ನಿಲ್ಲಿಸುವುದನ್ನು ನಿಷೇಧಿಸಲಾಗಿದೆ.
ಠಾಕ್ರೆಯವರ ನಿಧನದಿಂದಾಗಿ ಈಗಾಗಲೇ ಮುಂಬೈ ನಗರ ಸೇರಿದಂತೆ ಥಾಣೆ ನಗರವು ಸ್ಥಬ್ಧಗೊಂಡಿದ್ದು, ಈ ನಗರಗಳಲ್ಲಿ ಪರೋಕ್ಷವಾಗಿ ಬಂದ್ನ ಮೌನ ಆವರಿಸಿದೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.