ಲಖನೌ (ಪಿಟಿಐ): ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಕ್ಕಾಗಿ ಬಂಧಿತನಾಗಿರುವ ಬಿಎಸ್ಪಿ ಶಾಸಕ ಪುರುಷೋತ್ತಮ ನರೇಶ್ ದ್ವಿವೇದಿಯನ್ನು ಮುಗ್ಧ ಎಂದು ಸಮರ್ಥಿಸಿಕೊಂಡಿರುವ ಆತನ ಪತ್ನಿ, ವಾಸ್ತವ ತಿಳಿಯಲು ಶೀಘ್ರವೇ ಡಿಎನ್ಎ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಲು ಒತ್ತಾಯಿಸಿದ್ದಾರೆ.
ಒಂದೊಮ್ಮೆ ತಮ್ಮ ಕುಟುಂಬಕ್ಕೆ ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಶಾಸಕನ ಪತ್ನಿ ಆಶಾ ಬೆದರಿಕೆ ಹಾಕಿದ್ದಾರೆ. ತನ್ನ ಪತಿ, 18 ವರ್ಷಗಳಿಂದ ಮಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಅವರ ಎಡ ಮೂತ್ರಪಿಂಡವೂ ಕೆಲಸ ಮಾಡುತ್ತಿಲ್ಲ. ಹದಗೆಟ್ಟ ಆರೋಗ್ಯದ ಸ್ಥಿತಿಯಲ್ಲಿರುವ ಅವರು ಅತ್ಯಾಚಾರ ಎಸಗುವುದು ಸಾಧ್ಯವಿಲ್ಲ ಎಂದು ಆಶಾ ಹೇಳಿದ್ದಾರೆ.
ಪತಿಯ ರಾಜಕೀಯ ವಿರೋಧಿಗಳು ಈ ಸಂಚು ಹೆಣೆದಿದ್ದಾರೆ. ಈ ಬಗ್ಗೆ ಅಪರಾಧ ವಿಭಾಗದ ಪೊಲೀಸರು ಹಾಗೂ ಸಿಐಡಿಯಿಂದ ನಡೆಸುವಂತೆ ಆಗ್ರಹಿಸಿದ್ದಾರೆ.‘ಬಾಲಕಿಯ ಮೇಲಿನ ಕಳವು ಆರೋಪ ನಿಜ. ವೈದ್ಯಕೀಯ ಪರೀಕ್ಷೆಯಲ್ಲಿ ಕೂಡ ಆಕೆಯ ಮೇಲೆ ಅತ್ಯಾಚಾರ ಅಥವಾ ಹಲ್ಲೆ ನಡೆದಿರುವ ಕುರುಹು ಕಂಡುಬಂದಿಲ್ಲ. ಇನ್ನಿತರ ಆರೋಪಿಗಳೆಂದು ಬಾಲಕಿ ಹೇಳುತ್ತಿರುವ ವ್ಯಕ್ತಿಗಳೊಂದಿಗೆ ನಮಗೆ ಯಾವ ಸಂಬಂಧವೂ ಇಲ್ಲ’ ಎಂದು ಆಶಾ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.