ADVERTISEMENT

ತಣ್ಣಗಾಗದ ನಾಮಪತ್ರ ವಿವಾದ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 19:30 IST
Last Updated 4 ಜುಲೈ 2012, 19:30 IST

ನವದೆಹಲಿ/ಚಂಡಿಗಡ(ಪಿಟಿಐ): `ಯುಪಿಎ~ದ ರಾಷ್ಟ್ರಪತಿ ಅಭ್ಯರ್ಥಿ ಪ್ರಣವ್ ಮುಖರ್ಜಿ  ಸಲ್ಲಿರುವ ನಾಮಪತ್ರ ಮಂಗಳವಾರವೇ ಸ್ವೀಕೃತಗೊಂಡಿದ್ದರೂ, ಸಂಗ್ಮಾ ಎತ್ತಿದ್ದ ಲಾಭದಾಯಕ ಹುದ್ದೆ ವಿವಾದ ಮಾತ್ರ ಇನ್ನೂ ತಣ್ಣಗಾಗಿಲ್ಲ.

ಪ್ರಣವ್ ಮುಖರ್ಜಿ ಲಾಭದಾಯಕ ಹುದ್ದೆ ಕುರಿತು ಚುನಾವಣಾಧಿಕಾರಿಗೆ ಸಲ್ಲಿಸಿದ್ದ ತಕರಾರು ಅರ್ಜಿ ತಿರಸ್ಕೃತಗೊಂಡಿದ್ದರ ವಿವರಣಾತ್ಮಕ ವರದಿ ನೀಡಬೇಕೆಂದು ಸಂಗ್ಮಾ ಒತ್ತಾಯಿಸಿದ್ದಾರೆ.

ಪ್ರಣವ್ ಮುಖರ್ಜಿ, ಭಾರತೀಯ ಸಾಂಖ್ಯಿಕ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಮೊದಲು ರಾಜೀನಾಮೆ ನೀಡಿರಲಿಲ್ಲ. ವಿವಾದ ಎದ್ದ ಮೇಲೆ ರಾಜೀನಾಮೆ ಸಲ್ಲಿಸಿದ್ದಾರೆ. ಸಾಂಖ್ಯಿಕ ಸಂಸ್ಥೆ ಹಾಜರುಪಡಿಸಿರುವ ರಾಜೀನಾಮೆ ಪತ್ರ ನಕಲಿ ಎಂದಿರುವ ಬಿಜೆಪಿ, ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಹೇಳಿದೆ. ತಮ್ಮ ಅರ್ಜಿ ತಿರಸ್ಕೃತಗೊಂಡಿದ್ದು ಏಕೆ ಎಂದು ಚುನಾವಣಾ ಆಯೋಗ ವಿಸ್ತೃತ ವರದಿ ನೀಡಬೇಕು ಎಂದು ಸಂಗ್ಮಾ ಈ ಮಧ್ಯೆ ಪಟ್ಟು ಹಿಡಿದಿದ್ದಾರೆ.

ಈ ವಿಚಾರದ ಕುರಿತು ಬುಧವಾರ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರೊಂದಿಗೆ ಸಂಗ್ಮಾ ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ, ಚುನಾವಣಾ ಅಧಿಕಾರಿ ವಿ.ಕೆ.ಅಗ್ನಿಹೋತ್ರಿ ಅವರಿಗೆ ಸಂಗ್ಮಾಗೆ ಪೂರ್ಣ ವಿವರ ಸಲ್ಲಿಸುವಂತೆ ಸೂಚಿಸಿದೆ.

ಪ್ರಣವ್  ರಾಜೀನಾಮೆ ನಕಲಿ ಎಂದಿರುವ ಬಿಜೆಪಿಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚಿದಂಬರಂ ಇದು ಮುಖರ್ಜಿ ಹೆಸರು ಕೆಡಿಸುವ ಯತ್ನ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.