ನವದೆಹಲಿ: ‘ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಜೀಬ್ ಅಹ್ಮದ್ ನಾಪತ್ತೆ ಪ್ರಕರಣದ ತನಿಖೆಯಲ್ಲಿ ಕೇಂದ್ರಿಯ ತನಿ
ಖಾದಳವು (ಸಿಬಿಐ) ತೀವ್ರ ನಿರಾಸಕ್ತಿ ತೋರುತ್ತಿದೆ’ ಎಂದು ದೆಹಲಿ ಹೈಕೋರ್ಟ್ ಚಾಟಿ ಬೀಸಿದೆ.
ಇದರ ಬೆನ್ನಲ್ಲೇ ಹೈಕೋರ್ಟ್ ಮುಂದೆ ಪ್ರತಿಭಟನೆ ನಡೆಸಿದ ನಜೀಬ್ ತಾಯಿ ಹಾಗೂ 30 ಮಂದಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದರು.
ನಜೀಬ್ ನಾಪತ್ತೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಎಸ್. ಸಿಸ್ತಾನಿ ಹಾಗೂ ಚಂದರ್ ಶೇಖರ್, ‘ಒಂದು ವರ್ಷದಿಂದ ನಜೀಬ್ ನಾಪತ್ತೆಯಾಗಿದ್ದು, ಆತ ಎಲ್ಲಿದ್ದಾನೆ ಎಂಬ ಬಗ್ಗೆ ಹುಡುಕಲು ಸಿಬಿಐಗೆ ಸಾಧ್ಯವಾಗಿಲ್ಲ. ಕಾಗದದ ಮೇಲೂ ಯಾವುದೇ ಫಲಿತಾಂಶ ಕಂಡುಬಂದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಜೀಬ್ ತಾಯಿ ವಶಕ್ಕೆ: ‘ನಜೀಬ್ ತಾಯಿ ಫಾತಿಮಾ ನಫೀಸ್ ಹಾಗೂ ಜೆಎನ್ಯು ವಿದ್ಯಾರ್ಥಿಗಳು ಹೈಕೋರ್ಟ್ ಮುಂದೆ ಪ್ರತಿಭಟಿಸುತ್ತಿದ್ದರು, ನ್ಯಾಯಾಲಯದ ಒಳಗೆ ಪ್ರವೇಶಿಸಲು ಯತ್ನಿಸಿದ ವೇಳೆ ಬಂಧಿಸಲಾಗಿದೆ’ ಎಂದು ಡಿಸಿಪಿ ಬಿ.ಕೆಸಿಂಗ್ ತಿಳಿಸಿದರು.
ಬಂಧಿತರಲ್ಲಿ ಬಹುತೇಕ ವಿದ್ಯಾರ್ಥಿಗಳಿದ್ದು, ಬರಾಕಾಂಬ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಎಂದರು. 2016ರ ಅಕ್ಟೋಬರ್ 15ರಂದು ನವದೆಹಲಿಯ ಮಹಿಮಾಂಡೋವಿ ಹಾಸ್ಟೆಲ್ನಿಂದ 27 ವರ್ಷದ ಎಂಎಸ್ಸಿ ವಿದ್ಯಾರ್ಥಿ ನಜೀಬ್ ಕಣ್ಮರೆಯಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.