ADVERTISEMENT

ತಾಜ್‌ಮಹಲ್‌ ಇತಿಹಾಸದ ಕಪ್ಪುಚುಕ್ಕೆ: ಬಿಜೆಪಿ ಶಾಸಕ

ಮೊಘಲ್ ದೊರೆಗಳು ದ್ರೋಹಿಗಳು ಎಂದ ಸಂಗೀತ್ ಸೋಮ್ l ಇತಿಹಾಸ ಪಠ್ಯದಿಂದ ತೆಗೆಯಲು ಆಗ್ರಹ

ಪಿಟಿಐ
Published 16 ಅಕ್ಟೋಬರ್ 2017, 19:31 IST
Last Updated 16 ಅಕ್ಟೋಬರ್ 2017, 19:31 IST
ತಾಜ್‌ಮಹಲ್‌ ಇತಿಹಾಸದ ಕಪ್ಪುಚುಕ್ಕೆ: ಬಿಜೆಪಿ ಶಾಸಕ
ತಾಜ್‌ಮಹಲ್‌ ಇತಿಹಾಸದ ಕಪ್ಪುಚುಕ್ಕೆ: ಬಿಜೆಪಿ ಶಾಸಕ   

ಮೀರಠ್: ಇತಿಹಾಸದಲ್ಲಿ ತಾಜ್‌ಮಹಲ್‌ನ ಸ್ಥಾನವನ್ನು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರು ಪ್ರಶ್ನಿಸಿದ್ದಾರೆ. ತಾಜ್‌
ಮಹಲ್ ಇತಿಹಾಸದಲ್ಲಿ ಒಂದು ಕಪ್ಪುಚುಕ್ಕೆ ಎಂದಿರುವ ಅವರು ಶಾಲೆಗಳ ಇತಿಹಾಸ ಪಠ್ಯದಿಂದ ಅದನ್ನು ತೆಗೆದುಹಾಕುವಂತೆಯೂ ಆಗ್ರಹಿಸಿದ್ದಾರೆ.

ಸಿಸೋಲಿ ಗ್ರಾಮದಲ್ಲಿ ನಿರ್ಮಿಸಿರುವ 8ನೇ ಶತಮಾನದಲ್ಲಿ ಬದುಕಿದ್ದ ರಾಜ ಅನಂಗ್‌ಪಾಲ್ ಸಿಂಗ್ ತೋಮರ್ ಅವರ ಪ್ರತಿಮೆಯನ್ನು ಅನಾವರಣ ಮಾಡಿ ಮಾತನಾಡಿದ ಅವರು, ‘ಭಾರತದ ಮೇಲೆ ದಾಳಿ ಮಾಡಿದವರು ಇತಿಹಾಸದಲ್ಲಿ ವಿಜೃಂಭಿಸುತ್ತಿದ್ದಾರೆ. ಮಹಾರಾಣಾ ಪ್ರತಾಪ್, ಶಿವಾಜಿಯಂತಹ ಮಹಾನ್ ವ್ಯಕ್ತಿಗಳ ಪಠ್ಯಗಳನ್ನು ಶಾಲೆಗಳಲ್ಲಿ ಸೇರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪತ್ನಿ ಮುಮ್ತಾಜ್ ನೆನಪಿನಲ್ಲಿ ಶಹಜಹಾನ್‌ ತಾಜ್‌ಮಹಲ್ ನಿರ್ಮಿಸಿದ್ದ. ಆದರೆ ಹಿಂದೂಗಳ ಮೇಲಿನ ದ್ವೇಷದಿಂದಾಗಿ ಆತನ ಮಗ ಅಪ್ಪನನ್ನೇ ಬಂಧನದಲ್ಲಿಟ್ಟಿದ್ದ ಎಂದು ಅವರು ಹೇಳಿದ್ದಾರೆ.

ADVERTISEMENT

ಸರ್ದಾನ ಕ್ಷೇತ್ರವನ್ನು ಪ್ರತಿನಿಧಿಸುವ ಸೋಮ್ ಅವರು, ಮೊಘಲ್ ದೊರೆಗಳಾದ ಬಾಬರ್, ಅಕ್ಬರ್ ಹಾಗೂ ಔರಂಗಜೇಬ್‌ ದೇಶದ್ರೋಹಿಗಳು ಎಂದೂ ಆರೋಪಿಸಿದ್ದಾರೆ. ಇವರ ಹೆಸರುಗಳನ್ನು ಇತಿಹಾಸದ ಪುಸ್ತಕಗಳಿಂದ ತೆಗೆದುಹಾಕುವಂತೆಯೂ ಆಗ್ರಹಿಸಿದ್ದಾರೆ.

‘ತಾಜ್‌ಮಹಲ್ ಹಾಗೂ ಇತರ ಸ್ಮಾರಕಗಳು, ಹಿಂದೂಗಳ ಮೇಲೆ ದಾಳಿಕೋರರು ನಡೆಸಿದ ದೌರ್ಜನ್ಯದ ಕುರುಹುಗಳು’ ಎಂದು ಅವರು ತಿಳಿಸಿದ್ದಾರೆ.

ಉತ್ತರ ಪ್ರದೇಶ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಪರಿಚಯ ಪುಸ್ತಕದಿಂದ ತಾಜ್‌ಮಹಲ್‌ ಅನ್ನು ತೆಗೆದುಹಾಕಲು ಯೋಗಿ ಆದಿತ್ಯನಾಥ ನೇತೃ
ತ್ವದ ಸರ್ಕಾರ ನಿರ್ಧಾರ ಕೈಗೊಂಡ ಕೆಲ ದಿನಗಳಲ್ಲೇ ಸೋಮ್ ಅವರು ಈ ಹೇಳಿಕೆ ನೀಡಿದ್ದಾರೆ.

‘ಅಯೋಧ್ಯೆಯಲ್ಲಿ ರಾಮಮಂದಿರ ಹಾಗೂ ಮಥುರಾದಲ್ಲಿ ಕೃಷ್ಣ ಮಂದಿರ ಸ್ಥಾಪನೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದಿದ್ದಾರೆ.

ಸೋಮ್ ಅವರ ಈ ಹೇಳಿಕೆಗಳು ಹೊಸದೇನಲ್ಲ. ಈ ಹಿಂದೆ ದಾದ್ರಿ ಹಲ್ಲೆ ಪ್ರಕರಣ ಹಾಗೂ ಮುಜಫ್ಫರ್‌ನಗರ ಗಲಭೆಯ ವಿಚಾರಗಳಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.

‘ಅಭಿಪ್ರಾಯ ತಪ್ಪಲ್ಲ’
ನವದೆಹಲಿ ವರದಿ: ಭಾರತದಲ್ಲಿ ಮುಸ್ಲಿಂ ರಾಜರ ಆಡಳಿತದ ಅವಧಿಯು ಅನಾಗರಿಕ ಹಾಗೂ ಸಹಿಸಲಾಗದ ಅಸಹಿಷ್ಣುತೆಯಿಂದ ಕೂಡಿತ್ತು ಎಂದು ಬಿಜೆಪಿ ಸೋಮವಾರ ಪ್ರತಿಕ್ರಿಯಿಸಿದೆ.

ಸೋಮ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಜಿ.ವಿ.ಎಲ್ ನರಸಿಂಹರಾವ್ ಅವರು‘ನಿರ್ಧಿಷ್ಟ ಸ್ಮಾರಕದ ಬಗ್ಗೆ ಪಕ್ಷ ಯಾವ ನಿಲುವನ್ನೂ ಹೊಂದಿಲ್ಲ. ಪಕ್ಷದ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು’ ಎಂದಿದ್ದಾರೆ.

ಓವೈಸಿ ಪ್ರತಿಕ್ರಿಯೆಗೆ ತಿರುಗೇಟು ನೀಡಿದ ರಾವ್, ‘ಮುಸ್ಲಿಂ ರಾಜರು ಹಿಂದೂಗಳ ಮೇಲೆ ಹೊಂದಿದ್ದ ಅಸಹಿಷ್ಣುತೆಯನ್ನು ಈಗ ಓವೈಸಿಯಂತ ಮುಸ್ಲಿಂ ನಾಯಕರೂ ಹೊಂದಿದ್ದಾರೆ’ ಎಂದಿದ್ದಾರೆ.

ಸಾಮಾಜಿಕ ತಾಣಗಳಲ್ಲಿ ಆಕ್ಷೇಪ:ಬಿಜೆಪಿ ಶಾಸಕ ಸಂಗೀತ್ ಸೋಮ್ ಹೇಳಿಕೆಗೆ ಸಾಮಾಜಿಕ ಜಾಲತಾಣ ಬಳಕೆದಾರರಿಂದ ಆಕ್ಷೇಪ ವ್ಯಕ್ತವಾಗಿದೆ. ಸಾವಿರಕ್ಕೂ ಹೆಚ್ಚು ಮಂದಿ ಟ್ವಿಟರ್‌ನಲ್ಲಿ ಸೋಮ್‌ ಅವರ ವಿರುದ್ಧ ಹರಿಹಾಯ್ದಿದಿದ್ದಾರೆ.

ಕೆಂಪುಕೋಟೆಯ ಮೇಲೆ ಶ್ವಜ ಹಾರಿಸಲ್ವೇ..?
ಸೋಮ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ‘ತಾಜ್‌ಮಹಲ್‌ಗೆ ಭೇಟಿ ನೀಡದಂತೆ ಪ್ರವಾಸಿಗರಿಗೆ ಸರ್ಕಾರ ಸೂಚಿಸಲಿದೆಯೇ?’  ಎಂದು ಪ್ರಶ್ನೆ ಮಾಡಿದ್ದಾರೆ.

‘ಹಾಗಾದರೆ ವಂಚಕರು ದೆಹಲಿಯ ಕೆಂಪುಕೋಟೆಯನ್ನು ಕೂಡಾ ನಿರ್ಮಿಸಿದ್ದಾರೆ. ಮೋದಿ ಅವರು ಅಲ್ಲಿ ತ್ರಿವರ್ಣಧ್ವಜ ಹಾರಿಸುವುದನ್ನು ನಿಲ್ಲಿಸುತ್ತಾರಾ?’ ಎಂದು ಪ್ರಶ್ನಿಸಿದ್ದಾರೆ.

‘ದೆಹಲಿಯ ಹೈದ್ರಾಬಾದ್ ಹೌಸ್ ಕೂಡಾ ದ್ರೇಶದ್ರೋಹಿಗಳ ಕೊಡುಗೆ. ಕೊನೆಯ ನಿಜಾಮ ಒಸ್ಮಾನ್ ಖಾನ್ ಅಲಿ ಅದನ್ನು ನಿರ್ಮಿಸಿದ್ದ. ಮೋದಿ ಅವರು ವಿದೇಶಿ ಗಣ್ಯರಿಗೆ ಅಲ್ಲಿ ಸತ್ಕಾರ ನೀಡುವುದನ್ನು ನಿಲ್ಲಿಸಲಿದ್ದಾರೆಯೇ?’ ಎಂದೂ ಓವೈಸಿ ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.