ನವದೆಹಲಿ (ಪಿಟಿಐ): ತೃತೀಯ ರಂಗದ 'ಪ್ರಯೋಗ' ದೇಶಕ್ಕೆ ದುಬಾರಿಯಾಗಲಿದೆ ಎಂದು ಇತ್ತೀಚಿಗೆ 11 ಪಕ್ಷಗಳು ಮಾಡಿಕೊಂಡಿರುವ ಚುನಾವಣಾ ಮೈತ್ರಿ ವಿರುದ್ಧ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೇ ಜನತೆಯ ನಿರೀಕ್ಷೆಗಳಿಗೆ ಸ್ಪಂದಿಸುವ ಹಾಗೂ ನಿರ್ಧಾರಗಳನ್ನು ತೆಗೆದುಕೊಳ್ಳುವ ಸರ್ಕಾರ ದೇಶಕ್ಕೆ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
‘ದೇಶವು ನಿರ್ಣಾಯಕ ಹೊತ್ತಿನಲ್ಲಿರುವ ಈ ಸಮಯದಲ್ಲಿ ತೃತೀಯ ರಂಗದ ಪ್ರಯೋಗವು ದುಬಾರಿ ಎಂದು ಸಾಬೀತಾಗಲಿದೆ ಎಂಬುದು ನನ್ನ ದೃಢ ನಂಬಿಕೆ. ದೇಶಕ್ಕೆ ಇದೀಗ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಸರ್ಕಾರದ ಅಗತ್ಯವಿದೆ. ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಸರ್ಕಾರ ಬೇಕಾಗಿದೆ’ ಎಂದು ಹಿಂದಿ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಮೋದಿ ಹೇಳಿದ್ದಾರೆ.
‘ತೃತೀಯ ರಂಗ’ದ ರಚನೆಯ ಬಗ್ಗೆ ಪ್ರತಿಪಾದಿಸುತ್ತಿರುವ ಎಲ್ಲಾ ಪಕ್ಷಗಳೂ ರಾಜಕೀಯ ಅವಕಾಶಕ್ಕಾಗಿ ಒಂದಲ್ಲ ಒಂದು ಸಂದರ್ಭದಲ್ಲಿ ಕಾಂಗ್ರೆಸ್ ಜೊತೆಗೆ ‘ಬಲವಂತ’ವಾಗಿ ಕೈ ಜೋಡಿಸಿದ್ದವು. ಇದೀಗ ದೇಶದಲ್ಲಿ ಕಾಂಗ್ರೆಸ್ ವಿರೋಧಿ ‘ಅಲೆ’ ಇದ್ದು, ಅವು ತೃತೀಯ ರಂಗ ರಚನೆಗೆ ಶ್ರಮಿಸುತ್ತಿವೆ. ನಿಜಕ್ಕೂ ಇದು ಕಾಂಗ್ರೆಸ್ಗೆ ಸಹಾಯ ಮಾಡುವ ದಾರಿ’ ಎಂದು ಮೋದಿ ಅಭಿಪ್ರಾಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.