ನಾಗ್ಪುರ: ಕಾಂಗ್ರೆಸ್ ಕಾರ್ಯಕರ್ತರು ದಾಂದಲೆ ನಡೆಸಬಹುದು ಎನ್ನುವ ಭೀತಿಯಿಂದ ನಿರ್ದೇಶಕ ಮಧುರ್ ಭಂಡಾರ್ಕರ್ ಅವರು ಭಾನುವಾರ ತಮ್ಮ ‘ಇಂದು ಸರ್ಕಾರ್’ ಚಿತ್ರದ ಪ್ರಚಾರ ಕಾರ್ಯಕ್ರಮ ರದ್ದುಗೊಳಿಸಿದ್ದಾರೆ.
‘ಪುಣೆ ಬಳಿಕ ಇಂದು ನಾಗ್ಪುರದಲ್ಲಿಯೂ ನಾನು ಪತ್ರಿಕಾಗೋಷ್ಠಿ ರದ್ದುಮಾಡಿದ್ದೇನೆ. ಈ ಗೂಂಡಾಗಿರಿಯನ್ನು ನೀವು ಅನುಮೋದಿಸುತ್ತೀರಾ? ನಾನು ಅಭಿವ್ಯಕ್ತಿ ಸ್ವಾತಂತ್ರ್ಯ ಹೊಂದಬಹುದೆ?’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ಭಂಡಾರ್ಕರ್ ಟ್ವೀಟ್ ಮಾಡಿದ್ದಾರೆ.
ಚಿತ್ರದಲ್ಲಿ ಇದೆ ಎನ್ನಲಾಗುತ್ತಿರುವ ಮಾನಹಾನಿ ಅಂಶಗಳ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸುವ ಸಲುವಾಗಿ, ಪತ್ರಿಕಾಗೋಷ್ಠಿ ನಿಗದಿಗೊಳಿಸಿದ್ದ ಸ್ಥಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದರು. ಇದರಿಂದಾಗಿ ಭಂಡಾರ್ಕರ್ ಪತ್ರಿಕಾಗೋಷ್ಠಿ ರದ್ದುಪಡಿಸಿದ್ದಾರೆ. ಶನಿವಾರ ಪುಣೆಯಲ್ಲಿ ಸಹ ಪ್ರಚಾರ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.