ADVERTISEMENT

ದಿಗ್ವಿಜಯ್‌ ವಿರುದ್ಧ ಹಕ್ಕುಚ್ಯುತಿ

ಆಂಧ್ರ ವಿಧಾನಸಭೆಗೆ ಅಗೌರವ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 19:30 IST
Last Updated 14 ಡಿಸೆಂಬರ್ 2013, 19:30 IST

ಹೈದರಾಬಾದ್‌: ಆಂಧ್ರ ಪ್ರದೇಶ ಕಾಂಗ್ರೆಸ್‌ ಪಕ್ಷದೊಳಗಿನ ಎರಡು ಬಣಗಳ ನಡುವೆ ರಾಜಿ ಮಾಡಿಸಲು ಬಂದ ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ತಮ್ಮ ನಡವಳಿಕೆಗೆ ವಿವರಣೆ ನೀಡಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಸೀಮಾಂಧ್ರ ಭಾಗದ ತೆಲುಗು ದೇಶಂ ಪಕ್ಷದ (ಟಿಡಿಪಿ) ಶಾಸಕರು ದಿಗ್ವಿಜಯ ಸಿಂಗ್‌ ವಿರುದ್ಧ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸಭಾಧ್ಯಕ್ಷರಿಗೆ ಹಕ್ಕುಚ್ಯುತಿ ನೋಟಿಸ್‌ ಸಲ್ಲಿಸಿದ್ದಾರೆ. ಕಲಾಪ ಸಲಹಾ ಸಮಿತಿ ಸಭೆ ಸೋಮವಾರ ನಡೆಯಲಿದೆ ಮತ್ತು ಹೆಚ್ಚಿನ ಶಾಸಕರು ಭಾವಿಸಿರುವಂತೆ ತೆಲಂಗಾಣ ಮಸೂದೆ ಬಗ್ಗೆ ಮತದಾನ ಇರುವುದಿಲ್ಲ ಎಂದು ಹೇಳುವ ಮೂಲಕ ಸಿಂಗ್‌ ಹಕ್ಕುಚ್ಯುತಿ ಎಸಗಿದ್ದಾರೆ ಎಂದು ಟಿಡಿಪಿ ಶಾಸಕರು ಆರೋಪಿಸಿದ್ದಾರೆ.
 
ದಿಗ್ವಿಜಯ್ ಸಿಂಗ್‌ ಆಂಧ್ರ ಪ್ರದೇಶ ವಿಧಾನಸಭೆಗೆ ಅಗೌರವ ಉಂಟು ಮಾಡಿ­ದ್ದಾರೆ ಎಂದು ಟಿಡಿಪಿ ಸಭಾ ನಾಯಕ ಗಾಲಿ ಮುದ್ದುಕೃಷ್ಣಮ ನಾಯ್ಡು  ಹೇಳಿದ್ದಾರೆ.

ಯಾವ ಅಧಿಕಾರದಲ್ಲಿ ಸಿಂಗ್‌ ಅವರು ರಾಜ್ಯಪಾಲ ಇ.ಎಸ್‌.ಎಲ್‌. ನರಸಿಂಹನ್‌ ಅವರನ್ನು ಭೇಟಿಯಾಗಿ ತೆಲಂಗಾಣ ಕರಡು ಮಸೂದೆಯ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂಬುದು ಅರ್ಥವಾಗು­ವುದಿಲ್ಲ  ಎಂದು  ಹೇಳಿದ್ದಾರೆ.

ಕರಡು ಮಸೂದೆ ಚರ್ಚೆಗೆ ದಿನಾಂಕ ನಿಗದಿಪಡಿಸಲು ಕಲಾಪ ಸಲಹಾ ಸಮಿತಿ ಸಭೆ ಕರೆಯಲು ಸಭಾಧ್ಯಕ್ಷರಿಗೆ ಸೂಚಿಸುವ ಮೂಲಕ ರಾಜ್ಯ ವಿಧಾನಸಭೆ ಏನು ಮಾಡಬೇಕು ಎಂದು ದಿಗ್ವಿಜಯ್ ಸಿಂಗ್‌ ನಿರ್ದೇಶಿಸಿದ್ದಾರೆ ಎಂದು ಟಿಡಿಪಿ ಮುಖ್ಯಸ್ಥ ಎನ್‌. ಚಂದ್ರಬಾಬು ನಾಯ್ಡು ಆರೋಪಿಸದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.