ADVERTISEMENT

ದೇಶದಲ್ಲಿ ಕಲ್ಲಿದ್ದಲ ಕೋಲಾಹಲ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 9:10 IST
Last Updated 26 ಏಪ್ರಿಲ್ 2013, 9:10 IST

ನವದೆಹಲಿ (ಐಎಎನ್‌ಎಸ್): ಮಾರ್ಚಿ 8 ರ ವರದಿಯನ್ನು ಕೇಂದ್ರ ಸಚಿವ ಅಶ್ವಿನಿಕುಮಾರ್ ಹಾಗೂ ಪ್ರಧಾನಿ ಕಾರ್ಯಾಲಯದ ಹಿರಿಯ ಅಧಿಕಾರಿಗೆ ನೀಡಿರುವುದಾಗಿ ಸಿಬಿಯ ಸುಪ್ರೀಂಕೋರ್ಟ್‌ನಲ್ಲಿ ಶುಕ್ರವಾರ ಒಪ್ಪಿಕೊಳ್ಳುತ್ತಿದ್ದಂತೆ ವಿರೋಧಪಕ್ಷಗಳು ಸಂಸತ್ ಒಳಗೆ ಕೋಲಾಹಲ ಎಬ್ಬಿಸಿವೆ.

ಮಾರ್ಚಿ 8 ರ ವರದಿಯನ್ನು ತಾನು ಕೇಂದ್ರ ಕಾನೂನು ಸಚಿವ ಅಶ್ವಿನಿಕುಮಾರ್ ಹಾಗೂ ಪ್ರಧಾನಮಂತ್ರಿ ಕಾರ್ಯಾಲಯದ ಹಿರಿಯ ಅಧಿಕಾರಿಯೊಬ್ಬರಿಗೆ ನೀಡಿರುವುದಾಗಿ ಸುಪ್ರೀಂಕೋರ್ಟ್ ಮುಂದೆ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರು ಒಪ್ಪಿಕೊಂಡರು. ಆದರೆ ಏಪ್ರಿಲ್ 26 ರ ವರದಿಯನ್ನು ತಾನು ಯಾರಿಗೂ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರಲ್ಲದೆ ಇನ್ನು ಮುಂದೆ ತಾನು ಕಲ್ಲಿದ್ದಲ ಹಗರಣಕ್ಕೆ ಸಂಬಂಧಿಸಿದ ವರದಿಗಳನ್ನು ಯಾವುದೇ ರಾಜಕಾರಣಿಗೂ ನೀಡುವುದಿಲ್ಲ ಎಂದು ಪ್ರಮಾಣಪತ್ರ ಸಲ್ಲಿಸಿದರು.

ಇದನ್ನು ಖಂಡಿಸಿರುವ ವಿರೋಧಪಕ್ಷಗಳು ಸಚಿವ ಅಶ್ವಿನಿಕುಮಾರ್ ಹಾಗೂ ಪ್ರಧಾನಿ ಅವರ ರಾಜೀನಾಮೆಗೆ ಒತ್ತಾಯಿಸಿ, ಲೋಕಸಭೆಯಲ್ಲಿ ಕೋಲಾಹಲ ಎಬ್ಬಿಸಿವೆ.

ಇದರ ಬೆನ್ನಲ್ಲೆ ಯುಪಿಎ ಒಕ್ಕೂಟದ ಹಿರಿಯ ನಾಯಕರೊಂದಿಗೆ ಪ್ರಧಾನಿ ಮನಮೋಹನಸಿಂಗ್ ಅವರು ಸುಪ್ರೀಂಕೋರ್ಟ್‌ಗೆ ಸಿಬಿಐ ಸಲ್ಲಿಸಿರುವ ಪ್ರಮಾಣಪತ್ರ ಕುರಿತಂತೆ ಸಮಾಲೋಚನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಕಮಲ್‌ನಾಥ್ ಅವರು ಅಶ್ವಿನಿಕುಮಾರ್ ಅವರ ರಾಜೀನಾಮೆಯ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಯುಪಿಎ ಒಕ್ಕೂಟದ ಪ್ರಮುಖ ಅಂಗಪಕ್ಷ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಸಿಬಿಐ ತನ್ನ ವರದಿಯನ್ನು ಕೇಂದ್ರ ಸಚಿವರಿಗೆ ತೋರಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದೆ.

ಇದಲ್ಲದೆ ಸಿಬಿಐ ನಿರ್ದೇಶಕ ರಂಜಿತ್ ಸಿಂಗ್ ಅವರು ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸುವುದಕ್ಕೆ ಒಂದು ದಿನಕ್ಕೂ ಮೊದಲು ಅಂದರೆ ಗುರುವಾರ ಕೇಂದ್ರ ಸಚಿವ ವಿ. ನಾರಾಯಣಸ್ವಾಮಿ ಅವರನ್ನು ಭೇಟಿ ಮಾಡಿರುವುದು ವಿರೋಧಪಕ್ಷಗಳನ್ನು ಕೆರಳಿಸಿದೆ.

ಸಿಬಿಐ ನ ಆಂತರಿಕ ವಿಷಯಗಳನ್ನು ಕಾಂಗ್ರೆಸ್ ಹಸ್ತಕ್ಷೇಪ ನಡೆಸುತ್ತಿರುವುದು ಇದರಿಂದ ಜಗಜ್ಜಾಹೀರಾಗಿದೆ ಎಂದು ಆರೋಪಿಸಿರುವ ವಿರೋಧಪಕ್ಷಗಳು ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆದರಿಕೆಯಾಗಿದೆ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.