ನವದೆಹಲಿ: ಬರುವ ಮುಂಗಾರು ಹಂಗಾಮಿನಲ್ಲಿ ರಾಷ್ಟ್ರದಾದ್ಯಂತ ವಾಡಿಕೆಯಂತೆ ಮಳೆ ಸುರಿಯಬಹುದು ಎಂದು ಖಾಸಗಿ ಸಂಸ್ಥೆಯ ಹವಾಮಾನ ವಿಶ್ಲೇಷಣೆಯೊಂದು ಹೇಳಿದೆ.
ಜೂನ್ನಿಂದ ಸೆಪ್ಟೆಂಬರ್ವರೆಗಿನ ಅವಧಿಯಲ್ಲಿ ರಾಷ್ಟ್ರದ ವಾಡಿಕೆ ಮಳೆ ಪ್ರಮಾಣವು 89 ಸೆಂ.ಮೀ. ಆಗಿದೆ. ಈ ಬಾರಿ, ನೈರುತ್ಯ ಮಾರುತವು ಈ ಅವಧಿಯಲ್ಲಿ ವಾಡಿಕೆಗಿಂತ ಸ್ವಲ್ಪ ಹೆಚ್ಚು, ಅಂದರೆ ಶೇ 103ರಷ್ಟು ಮಳೆ ಸುರಿಯಬಹುದು ಎಂದು ಸ್ಕೈಮೆಟ್ ಎಂಬ ಸಂಸ್ಥೆಯ ಅಧ್ಯಯನ ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆ ಸಾಮಾನ್ಯವಾಗಿ ಏಪ್ರಿಲ್ ಕೊನೆಯ ವೇಳೆಗೆ ಇಡೀ ಮುಂಗಾರು ಹಂಗಾಮಿನ ಮುನ್ಸೂಚನೆ ಪ್ರಕಟಿಸುತ್ತದೆ. ಅದಾದ ಕೆಲ ಅವಧಿಯ ನಂತರ ತಿಂಗಳುವಾರು ಮುನ್ಸೂಚನೆ ಪ್ರಕಟಿಸುತ್ತದೆ. ಆದರೆ ಈ ಬಾರಿ ಖಾಸಗಿ ಸಂಸ್ಥೆಯು ಅದಕ್ಕಿಂತ ಮುನ್ನವೇ ಮುನ್ಸೂಚನೆ ಪ್ರಕಟಿಸಿರುವುದು ಮಾತ್ರವಲ್ಲದೆ, ತಿಂಗಳುವಾರು ಮಳೆ ಪ್ರಮಾಣದ ಲೆಕ್ಕಾಚಾರವನ್ನೂ ಕೂಡ ಈಗಲೇ ಸಿದ್ಧಪಡಿಸಿದೆ.
ಆಗಸ್ಟ್ ತಿಂಗಳಲ್ಲಿ ಮೋಡ ಸಾಂದ್ರೀಕರಣ ಕಡಿಮೆಯಾಗುತ್ತದೆ. ಪರಿಣಾಮವಾಗಿ ಮಳೆ ಸುರಿಯುವಿಕೆಯೂ ಸ್ವಲ್ಪ ತಗ್ಗಲಿದೆ. ಹಿಂದೂ ಮಹಾಸಾಗರದ ಪಶ್ಚಿಮ ಭಾಗದಲ್ಲಿ ಪೂರ್ವ ಭಾಗಕ್ಕಿಂತ ಹೆಚ್ಚಿನ ಉಷ್ಣತೆ ಉಂಟಾಗುವುದೇ ಇದಕ್ಕೆ ಕಾರಣ ಎಂದು ಸಂಸ್ಥೆಯ ಸಿಇಒ ಜತಿನ್ ಸಿಂಗ್ ವಿವರಿಸಿದ್ದಾರೆ. ಆದರೆ, ಹಿಂದೂ ಮಹಾಸಾಗರದ ಉಷ್ಣತೆಯ ಅಸಮತೋಲನದಿಂದ ಆಗಸ್ಟ್ನಲ್ಲಿ ಕಡಿಮೆ ಮಳೆ ಸುರಿಯಲಿದೆ ಎಂಬ ಈ ಲೆಕ್ಕಾಚಾರದ ಬಗ್ಗೆ ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಹಿಂದೂ ಮಹಾಸಾಗರಾದ ಉಷ್ಣತೆಯ ಅಸಮತೋಲನವನ್ನು ಈಗಲೇ ಊಹಿಸುವುದು ಕಷ್ಟ. ಆಗಸ್ಟ್ನಲ್ಲಿ ಮಾತ್ರ ಈ ಪ್ರಕ್ರಿಯೆಯ ಬಗ್ಗೆ ಅಂದಾಜಿಸಬಹುದು ಎಂದಿದ್ದಾರೆ.
ರಾಷ್ಟ್ರದಲ್ಲಿ ಒಟ್ಟಾರೆ ವಾಡಿಕೆಗಿಂತ ಸ್ವಲ್ಪ ಹೆಚ್ಚು ಮಳೆ ಬೀಳುವ ಸಾಧ್ಯತೆಯಿದ್ದರೂ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶದ ಉತ್ತರ ಭಾಗಗಳಲ್ಲಿ ಜೂನ್- ಜುಲೈ ತಿಂಗಳಲ್ಲಿ ಕಡಿಮೆ ಮಳೆಯಾಗಬಹುದು ಎಂದು ಸಂಸ್ಥೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.