
ಬಾಲಸೋರ್ (ಒಡಿಶಾ): ವೈರಿ ಸಿಡಿತಲೆ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವುಳ್ಳ ದೇಶೀಯವಾಗಿ ಅಭಿವೃದ್ಧಿ ಪಡಿಸಿದ ~ನಿರೋಧಕ ಕ್ಷಿಪಣಿ~ಯನ್ನು ಭಾರತ ಭಾನುವಾರ ಯಶಸ್ವಿಯಾಗಿ ಪರೀಕ್ಷಿಸಿತು. ಒಡಿಶಾ ಕರಾವಳಿ ಸಮೀಪ ಸಮುದ್ರದಲ್ಲಿನ ವ್ಹೀಲರ್ ದ್ವೀಪದ ಸಮಗ್ರ ಪರೀಕ್ಷಾ ವಲಯದಲ್ಲಿ ಈ ಪರೀಕ್ಷೆ ನಡೆಯಿತು.
ಬಹುವಿಧ ಸಿಡಿತಲೆ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಗುರಿಯೊಂದಿಗೆ ಒಡಿಶಾ ಕರಾವಳಿ ಸಮೀಪದ ಎರಡು ಉಡಾವಣಾ ಸ್ಥಳಗಳಿಂದ ಈ ಕ್ಷಿಪಣಿ ಪರೀಕ್ಷೆ ನಡೆಸಲಾಯಿತು ಎಂದು ರಕ್ಷಣಾ ಮೂಲಗಳು ತಿಳಿಸಿದವು.
ಪರೀಕ್ಷೆಯನ್ನು ಯಶಸ್ವೀ ಎಂಬುದಾಗಿ ಬಣ್ಣಿಸಿದ ಮೂಲಗಳು ~ಉದ್ದೇಶಿತ ಫಲಿತಾಂಶವನ್ನು ನಿಖರವಾಗಿ ಪಡೆಯುವ ಸಲುವಾಗಿ ಈ ಕಾರ್ಯಾಚರಣೆ ನಡೆಸಲಾಯಿತು ಎಂದು ಹೇಳಿದವು.
ವೈರಿ ಸಿಡಿತಲೆ ಕ್ಷಿಪಣಿಯನ್ನು ಹೊಡೆದುರುಳಿಸುವ ಗುರಿಯೊಂದಿಗೆ ನೆಲದಿಂದ ನೆಲಕ್ಕೆ ಹಾರುವ ಪರಿಷ್ಕೃತ ~ಪೃಥ್ವಿ~ ನಿರೋಧಕ ಕ್ಷಿಪಣಿಯನ್ನು ಮೊದಲು ಬೆಳಗ್ಗೆ 9.33 ಗಂಟೆಗೆ ಸಂಚಾರಿ ಉಡಾವಣಾ ವಾಹನದ ಮೂಲಕ ಇಲ್ಲಿಗೆ 15 ಕಿ.ಮೀ. ದೂರದ ಚಂಡೀಪುರ ಸಮುದ್ರದಲ್ಲಿ ಉಡಾಯಿಸಲಾಯಿತು ಎಂದು ಮೂಲಗಳು ವಿವರಿಸಿದವು.
ನಾಲ್ಕು ನಿಮಿಷಗಳ ಒಳಗಾಗಿ ಚಂಡೀಪುರದಿಂದ 70 ಕಿಮೀ ದೂರದಲ್ಲಿನ ಸಮುದ್ರದೊಳಗಿನ ವ್ಹೀಲರ್ ದ್ವೀಪದಿಂದ ಆತ್ಯಾಧುನಿಕ ವೈಮಾನಿಕ ರಕ್ಷಣಾ ನಿರೋಧಕ ಕ್ಷಿಪಣಿ ರೇಡಾರ್ ಗಳ ಮೂಲಕ ಸಂಕೇತಗಳನ್ನು ಗ್ರಹಿಸಿ ನಾಲ್ಕು ಪಟ್ಟು ವೇಗದೊಂದಿಗೆ ಬಾನಿನತ್ತ ನೆಗೆಯಿತು ಎಂದು ಮೂಲಗಳು ಹೇಳಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.