ರಾಯಪುರ (ಪಿಟಿಐ): ಛತ್ತೀಸಗಡದಲ್ಲಿ ಮಾವೋವಾದಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದು, ಶನಿವಾರ ನೆಲಬಾಂಬ್ ಸ್ಫೋಟಿಸಿ ಮನಬಂದಂತೆ ಗುಂಡು ಹಾರಿಸಿ ಏಳು ಚುನಾವಣಾ ಸಿಬ್ಬಂದಿ ಮತ್ತು ಐವರು ಸಿಆರ್ಪಿಎಫ್ ಯೋಧರು ಸೇರಿ 14 ಮಂದಿಯನ್ನು ಕೊಂದಿದ್ದಾರೆ.
ಛತ್ತೀಸಗಡದ ಬಿಜಾಪುರ ಮತ್ತು ಬಸ್ತರ್ ಜಿಲ್ಲೆಗಳಲ್ಲಿ ಈ ದಾಳಿ ನಡೆದಿದೆ. ದಾಳಿಯ ನಂತರ ಎರಡೂ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
ಚುನಾವಣಾ ಕರ್ತವ್ಯ ಮುಗಿಸಿಕೊಂಡು ಬಸ್ನಲ್ಲಿ ಹಿಂತಿರುಗುತ್ತಿದ್ದ ವೇಳೆ ಬಿಜಾಪುರ ಜಿಲ್ಲೆಯ ಕೆತುಲ್ನಾರ ಗ್ರಾಮದ ಬಳಿ ನಕ್ಸಲರು ನೆಲಬಾಂಬ್ ಸ್ಫೋಟಿಸಿ ಮನಬಂದಂತೆ ಗುಂಡು ಹಾರಿಸಿದಾಗ 7 ಚುನಾವಣಾ ಸಿಬ್ಬಂದಿ ಅಸುನೀಗಿದರು.
ಇದಾದ ಕೆಲವೇ ಹೊತ್ತಿನಲ್ಲಿ ಬಸ್ತರ್ ಜಿಲ್ಲೆಯ ಕಮನಾರ್ ಗ್ರಾಮದ ಸಮೀಪ ಆಂಬುಲೆನ್ಸ್ ಮೇಲೆ ನಕ್ಸಲರು ನಡೆಸಿದ ದಾಳಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಐವರು ಯೋಧರು, ಚಾಲಕ ಮತ್ತು ಅರೆವೈದ್ಯಕೀಯ ಸಿಬ್ಬಂದಿ ಸಾವನ್ನಪ್ಪಿದರು ಎಂದು ಎಡಿಜಿಪಿ ವಿಜಿ ತಿಳಿಸಿದರು.
ಈ ದಾಳಿಗೆ ಉತ್ತರ ನೀಡಲು ಭದ್ರತಾ ಪಡೆ ಸ್ಥಳಕ್ಕೆ ಬರುವಷ್ಟರಲ್ಲಿ ನಕ್ಸಲರು ದಟ್ಟಾರಣ್ಯದತ್ತ ಓಡಿಹೋದರು ಎಂದು ಅವರು ನುಡಿದರು. ‘ಈ ದಾಳಿಯಿಂದ ಚುನಾವಣಾ ಸಿಬ್ಬಂದಿ ಬಳಿಯಿದ್ದ ವಿದ್ಯುನ್ಮಾನ ಮತ ಯಂತ್ರಗಳಿಗೆ ಹಾನಿಯಾಗಿದೆ’ ಎಂದು ಮುಖ್ಯ ಚುನಾವಣಾಧಿಕಾರಿ ಸುನಿಲ್ ಕುಜುರ್ ಹೇಳಿದ್ದಾರೆ.
ದುರದೃಷ್ಟಕರ ಸಂಪತ್ ಹೇಳಿಕೆ: ಚೆನ್ನೈ ವರದಿ: ‘ಛತ್ತೀಸಗಡದ ಎರಡು ಕಡೆಗಳಲ್ಲಿ ಚುನಾವಣಾ ಮತ್ತು ಭದ್ರತಾ ಸಿಬ್ಬಂದಿಯ ಮೇಲೆ ನಡೆದಿರುವ ದಾಳಿ ದುರದೃಷ್ಟಕರ’ ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.