ನವದೆಹಲಿ: ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು ಈ ವಿಷಯದ ಬಗ್ಗೆ ರಾಜ್ಯ ಸಭೆಯಲ್ಲಿ ಮಾತನಾಡಲು ಅನುಮತಿ ನೀಡದೇ ಇದ್ದರೆ ನಾನು ಈ ಕ್ಷಣವೇ ರಾಜೀನಾಮೆ ನೀಡಿ ಹೊರನಡೆಯುವುದಾಗಿ ಬಹುಜನ ಸಮಾಜ ಪಾರ್ಟಿ ಮುಖ್ಯಸ್ಥೆ ಮಾಯಾವತಿ ಗುಡುಗಿದ್ದಾರೆ.
ಶಹರಣ್ಪುರ್ನಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯದ ಬಗ್ಗೆ ಮಾಯಾವತಿಯವರು ಮಾತನಾಡುತ್ತಿದ್ದಾಗ ಸದನದಲ್ಲಿ ಗದ್ದಲವುಂಟಾಗಿದೆ. ಈ ವೇಳೆ ಸಿಟ್ಟುಗೊಂಡ ಮಾಯಾವತಿ, ಸದನದಲ್ಲಿ ನನಗೆ ಮಾತನಾಡಲು ಅವಕಾಶ ನೀಡದೇ ಇದ್ದರೆ ನಾನು ಈ ಕ್ಷಣವೇ ರಾಜೀನಾಮೆ ನೀಡುತ್ತೇನೆ. ಈಗಲೇ ಬಂದು ನಾನು ರಾಜೀನಾಮೆ ನೀಡುವೆ ಎಂದು ಹೇಳಿ ಮಾಯಾವತಿ ಸದನದಿಂದ ಹೊರ ನಡೆದಿದ್ದಾರೆ.
ರಾಜ್ಯಸಭೆಯಲ್ಲಿ ನಾನು ಸಮಾಜದ ದುರ್ಬಲ ವಿಭಾಗದ ಜನರ ಬಗ್ಗೆ ಮಾತನಾಡಲು ಹೋದರೆ ನನಗೆ ಮಾತನಾಡಲು ಅವಕಾಶ ನೀಡಲಿಲ್ಲ, ಯಾಕೆ? ಇದು ನಾಚಿಕೆಗೇಡಿನ ಸಂಗತಿ. ದುರ್ಬಲ ವಿಭಾಗದ ಜನರ ಬಗ್ಗೆ ನಾನು ಸದನದಲ್ಲಿ ಮಾತನಾಡಿಲ್ಲ ಎಂದರೆ ಸದನದಲ್ಲಿರಲು ನನಗೆ ಹಕ್ಕು ಇಲ್ಲ. ಆದ್ದರಿಂದಲೇ ನಾನು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ನನ್ನ ಮಾತನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ, ನನ್ನನ್ನು ಮಾತನಾಡಲೂ ಬಿಡುವುದಿಲ್ಲ ಎಂದು ಸದನದಿಂದ ಹೊರ ಬಂದು ಮಾತನಾಡಿದ ಮಾಯಾವತಿ ಹೇಳಿದ್ದಾರೆ.
ಸದನದಲ್ಲಿ ತಮ್ಮ ಭಾಷಣಕ್ಕೆ ಅಡ್ಡಿಯುಂಟಾದಾಗ ಮಾಯಾವತಿ ಅಲ್ಲಿಂದ ಹೊರ ನಡೆದಿದ್ದಾರೆ. ಈ ವೇಳೆ ವಿಪಕ್ಷಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಲಾಪಕ್ಕೆ ಅಡ್ಡಿಯುಂಟು ಮಾಡಿದ್ದರಿಂದ ಕಲಾಪ ಮುಂದೂಡಲಾಯಿತು.
ಮಾಯಾವತಿಯವರು ರಾಜ್ಯಸಭೆಗೆ ಮತ್ತು ರಾಜ್ಯಸಭಾ ಅಧ್ಯಕ್ಷರಿಗೆ ಅಗೌರವ ತೋರಿದ್ದಾರೆ. ಹಾಗಾಗಿ ಅವರು ಕ್ಷಮೆ ಕೇಳಬೇಕೆಂದು ಬಿಜೆಪಿ ನೇತಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಕ್ತರ್ ಅಬ್ಬಾಸ್ ನಖ್ವಿ ಒತ್ತಾಯಿಸಿದ್ದಾರೆ.
ದೇಶದಲ್ಲಿ ದಲಿತರ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ದಲಿತರು ಮತ್ತು ಅಲ್ಪ ಸಂಖ್ಯಾತರು ಅಪಾಯದಲ್ಲಿ ಸಿಲುಕಿದ್ದಾರೆ ಎಂದು ಸಿಪಿಎಂ ನೇತಾರ ಸೀತಾರಾಂ ಯೆಚೂರಿ ಮಾಯಾವತಿಯವರ ಜತೆ ದನಿಗೂಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.