ನವದೆಹಲಿ: ‘ನಾನು ಪ್ರಧಾನಿ ನರೇಂದ್ರ ಮೋದಿ ಅಲ್ಲ. ನಾನು ಒಬ್ಬ ಮನುಷ್ಯ. ಮನುಷ್ಯರಿಂದ ತಪ್ಪುಗಳಾಗುವುದು ಸಹಜ. ಇಂಥ ತಪ್ಪುಗಳಿದ್ದಾಗಲೇ ಜೀವನ ಆಸಕ್ತಿದಾಯಕವಾಗಿರುತ್ತದೆ’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ ಲೆಕ್ಕಾಚಾರದಲ್ಲಿ ಆದ ತಪ್ಪನ್ನೇ ದೊಡ್ಡ ಪ್ರಮಾದ ಎಂಬಂತೆ ಲೇವಡಿ ಮಾಡುತ್ತಿರುವ ಬಿಜೆಪಿ ಬೆಂಬಲಿಗರನ್ನು ಅವರು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ ಮೋದಿ ಅವರನ್ನೂ ಲೇವಡಿ ಮಾಡಿದ್ದಾರೆ.
‘ಬಿಜೆಪಿಯ ಮಿತ್ರರೇ, ನಾನೇನೂ ನರೇಂದ್ರ ಭಾಯ್ ಅಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ. ಮನುಷ್ಯರಿಂದಲ್ಲದೆ ಮತ್ತೆ ಇನ್ನಾರಿಂದ ತಪ್ಪಾಗಲು ಸಾಧ್ಯ’ ಎಂದು ಪ್ರಶ್ನಿಸಿರುವ ರಾಹುಲ್ ಗಾಂಧಿ, ಯಾವುದೇ ಹಿಂಜರಿಕೆ ಇಲ್ಲದೆ ತಮ್ಮಿಂದ ಆದ ತಪ್ಪನ್ನು ನೇರವಾಗಿ ಒಪ್ಪಿಕೊಂಡಿದ್ದಾರೆ.
‘ನನ್ನಿಂದ ಆದ ತಪ್ಪನ್ನು ಎತ್ತಿ ತೋರಿಸಿದಕ್ಕೆ ನಿಮಗೆ ಧನ್ಯವಾದ. ನನ್ನಿಂದಾಗುವ ತಪ್ಪುಗಳನ್ನು ತೋರಿಸುತ್ತಿದ್ದರೆ ತಿದ್ದಿಕೊಳ್ಳಲು ನಿಜಕ್ಕೂ ಸಹಾಯವಾಗುತ್ತದೆ. ನಿಮ್ಮೆಲ್ಲರ ಪ್ರೀತಿಗೆ ಋಣಿ’ ಎಂದು ರಾಹುಲ್ ಬುಧವಾರ ಟ್ವೀಟ್ ಮಾಡಿದ್ದಾರೆ.
‘ಭಾರತದಲ್ಲಿ ಪ್ರಾಮಾಣಿಕ ರಾಜಕಾರಣಿಯಾಗಿರುವುದು ಅತ್ಯಂತ ಕಷ್ಟದ ಕೆಲಸ. ಆತ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅದನ್ನು ನಾನು ಅನುಭವಿಸಿದ್ದೇನೆ’ ಎಂದು ರಾಹುಲ್ ಇತ್ತೀಚೆಗೆ ಗುಜರಾತ್ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.