ನವದೆಹಲಿ (ಪಿಟಿಐ): ನಾರ್ವೆಯಲ್ಲಿರುವ ಅನಿವಾಸಿ ದಂಪತಿಯ ಮಕ್ಕಳು ಅಲ್ಲಿನ ಸರ್ಕಾರದ ವಶದಲ್ಲಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ತೀವ್ರ ನಿಗಾ ವಹಿಸಿದೆ. ಈ ಪ್ರಕರಣದ ಪ್ರತಿ ಬೆಳವಣಿಗೆಯನ್ನು ಗಮನಿಸುತ್ತಿದೆ. ಅಗತ್ಯ ಬಿದ್ದಲ್ಲಿ ಉನ್ನತ ಮಟ್ಟದ ಅಧಿಕಾರಿಗಳನ್ನು ಮತ್ತೊಮ್ಮೆ ಅಲ್ಲಿಗೆ ಕಳುಹಿಸಲಿದೆ ಎಂದು ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ ತಿಳಿಸಿದ್ದಾರೆ.
ಇದೇ ಪ್ರಕರಣದ ಕುರಿತು ನಾರ್ವೆ ಸರ್ಕಾರದ ಜತೆ ಮಾತನಾಡಲು ತೆರಳಿದ್ದ ವಿದೇಶಾಂಗ ಇಲಾಖೆ ಅಧಿಕಾರಿ ಮಧುಸೂದನ್ ಗಣಪತಿ ಅವರ ವರದಿಯನ್ನು ಸ್ವೀಕರಿಸಿದ ನಂತರ ಕೃಷ್ಣ ಈ ಹೇಳಿಕೆ ನೀಡಿದರು.
`ಈ ಮಕ್ಕಳ ಪಾಲನೆಗೆ ಸಂಬಂಧಿಸಿದಂತೆ ನಾರ್ವೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಮಾರ್ಚ್ 23ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಆನಂತರವೇ ಸರ್ಕಾರ ಕ್ರಮ ಕೈಗೊಳ್ಳಲು ಸಾಧ್ಯ~
`ಅಲ್ಲಿಗೆ ತೆರಳಿದ್ದ ನಮ್ಮ ಅಧಿಕಾರಿ, ನಾರ್ವೆ ಸರ್ಕಾರದ ಹಿರಿಯ ಸಚಿವರನ್ನೆಲ್ಲ ಭೇಟಿಯಾಗಿ ಮಾತನಾಡಿದ್ದಾರೆ. ಪ್ರಕರಣ ಕೋರ್ಟ್ನಲ್ಲಿ ಇರುವುದರಿಂದ ಅಲ್ಲಿನ ಶಾಸಕಾಂಗ ಸಹ ಏನೂ ಮಾಡಲು ಸಾಧ್ಯವಿಲ್ಲ~ ಎಂದು ವಿದೇಶಾಂಗ ಸಚಿವರು ಹೇಳಿದರು.
ನಾರ್ವೆಯಲ್ಲಿ ವಾಸಿಸುತ್ತಿದ್ದ ಅನಿವಾಸಿ ದಂಪತಿ ಅನುರೂಪ್ ಹಾಗೂ ಸಾಗರಿಕಾ ಭಟ್ಟಾಚಾರ್ಯ ಅವರ ಮಕ್ಕಳಾದ ಅಭಿಜ್ಞಾನ (1) ಮತ್ತು ಐಶ್ವರ್ಯ (3) ಅವರನ್ನು ಪಾಲಕರು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿ, ಅಲ್ಲಿನ ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ತೆಗೆದುಕೊಂಡಿತ್ತು.
ಭಾರತ ರಾಜತಾಂತ್ರಿಕ ಒತ್ತಡ ಹೇರಿದ ಫಲವಾಗಿ ಈ ಮಕ್ಕಳನ್ನು ಭಾರತದಲ್ಲಿರುವ ಅವರ ಚಿಕ್ಕಪ್ಪನಿಗೆ ಕೊಡಲು ಈಗ ನಾರ್ವೆ ಮಕ್ಕಳ ಕಲ್ಯಾಣ ಸಮಿತಿ ಒಪ್ಪಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.