ADVERTISEMENT

ನಿಯಮ ಉಲ್ಲಂಘಿಸಿ ರಸ್ತೆ ನಿರ್ಮಾಣ: ಸಚಿವ ಸ್ಥಾನಕ್ಕೆ ಥಾಮಸ್ ಚಾಂಡಿ ರಾಜೀನಾಮೆ

ಏಜೆನ್ಸೀಸ್
Published 15 ನವೆಂಬರ್ 2017, 8:54 IST
Last Updated 15 ನವೆಂಬರ್ 2017, 8:54 IST
ಥಾಮಸ್‌ ಚಾಂಡಿ
ಥಾಮಸ್‌ ಚಾಂಡಿ   

ತಿರುವನಂತಪುರ: ನಿಯಮ ಉಲ್ಲಂಘಿಸಿ ರೆಸಾರ್ಟ್‌ಗೆ ರಸ್ತೆ ನಿರ್ಮಾಣ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೇರಳದ ಸಾರಿಗೆ ಸಚಿವ ಥಾಮಸ್‌ ಚಾಂಡಿ ಬುಧವಾರ ರಾಜೀನಾಮೆ ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಮಸ್‌ ಅವರಿಗೆ ಛೀಮಾರಿ ಹಾಕಿದ್ದ ಕೇರಳ ಹೈಕೋರ್ಟ್‌, ಹಗರಣ ನಡೆಸಿದ ಆರೋಪ ಹೊತ್ತುಕೊಂಡು ಸಚಿವ ಸ್ಥಾನದಲ್ಲಿ ಮುಂದುವರಿಯುವುದು ಎಷ್ಟು ಸರಿ ಎಂದು ಪ್ರಶ್ನಿಸಿತ್ತು.

ಅಲಪ್ಪುಳ ಜಿಲ್ಲೆಯಲ್ಲಿ ಥಾಮಸ್‌ ಅವರಿಗೆ ಸೇರಿದ ರೆಸಾರ್ಟ್‌ಗೆ ಭತ್ತದ ಗದ್ದೆಗಳ ಮೂಲಕ ರಸ್ತೆ ನಿರ್ಮಿಸಲಾಗಿದೆ. ಥಾಮಸ್‌ ಅವರಿಗೆ ಸೇರಿದ ಕಂಪೆನಿಯೇ ನಿಯಮ ಉಲ್ಲಂಘಿಸಿ ಈ ರಸ್ತೆ ನಿರ್ಮಿಸಿದೆ ಎಂಬ ಆರೋಪ ಅವರ ಮೇಲಿದೆ.

ADVERTISEMENT

ಈ ಬಗ್ಗೆ ತನಿಖೆ ನಡೆಸುವಂತೆ ವಿಚಾರಣಾ ನ್ಯಾಯಾಲಯವು ಕಳೆದ ವಾರ ಆದೇಶ ನೀಡಿತ್ತು. ನಿಯಮ ಉಲ್ಲಂಘನೆಯಾಗಿರುವ ಬಗ್ಗೆ ಥಾಮಸ್‌ ಅವರ ವಿರುದ್ಧ ಅಲಪ್ಪುಳ ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದರು.

‘ನನ್ನ ವಿರುದ್ಧದ ಆರೋಪ ಸುಳ್ಳು. ನಾನು ಆರೋಪ ಮುಕ್ತನಾಗಿ ಮತ್ತೆ ಮರಳುತ್ತೇನೆ’ ಎಂದು ರಾಜೀನಾಮೆ ನೀಡಿದ ಬಳಿಕ ಥಾಮಸ್‌ ಹೇಳಿದ್ದಾರೆ.

‘ನನ್ನ ವಿರುದ್ಧದ ದೋಷಾರೋಪಗಳನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇನೆ. ಸುಪ್ರೀಂಕೋರ್ಟ್‌ನಲ್ಲಿ ನನ್ನ ಪರವಾಗಿ ತೀರ್ಪು ಬರುವ ವಿಶ್ವಾಸವಿದೆ’ ಎಂದು ಥಾಮಸ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.