ನವದೆಹಲಿ: `ಸುಳ್ಳು ಪ್ರಕರಣಗಳನ್ನು ದಾಖಲಿಸಿದರೆ ತೊಂದರೆಗೆ ಒಳಗಾದವರನ್ನು ರಕ್ಷಿಸಲು ನಮ್ಮ ಅಪರಾಧ ನ್ಯಾಯ ಶಾಸ್ತ್ರದಲ್ಲಿ ಸಾಕಷ್ಟು ಅವಕಾಶಗಳು ಇವೆ~ ಎಂದು ಸುಪ್ರೀಂಕೊರ್ಟ್ ಸ್ಪಷ್ಟಪಡಿಸಿದೆ.
ದೇಶದಲ್ಲಿ 2002ರ ನಂತರ ನಡೆದ ಎಲ್ಲಾ ಸ್ಫೋಟದ ಪ್ರಕರಣಗಳನ್ನು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ಒತ್ತಾಯಿಸಿ ಮುಂಬೈನ ಇಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾ ಮಾಡಿದ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಮತ್ತು ಎಫ್.ಎಂ.ಐ. ಕಲಿಫುಲ್ಲಾ ಅವರನ್ನು ಒಳಗೊಂಡ ನ್ಯಾಯಪೀಠವು, ಸುಳ್ಳು ಪ್ರಕರಣನ್ನು ದಾಖಲಿಸಿದರೆ ರಕ್ಷಣೆ ನೀಡಲು ಕಾನೂನಿನಲ್ಲಿ ಸಾಕಷ್ಟು ಅವಕಾಶವಿರುವುದರಿಂದ ವಿಶೇಷ ತನಿಖಾ ತಂಡದ ಅಗತ್ಯವಿಲ್ಲ ಎಂದು ತಿಳಿಸಿದೆ.
ಸ್ಫೋಟದ ಪ್ರಕರಣಗಳಲ್ಲಿ ಮುಸ್ಲಿಂ ಸಮುದಾಯದವರನ್ನೇ ಹೆಚ್ಚಾಗಿ ಗುರಿಪಡಿಸಲಾಗಿದೆ ಎಂಬುದು ಅರ್ಜಿದಾರರಾದ ಗಲ್ಜಾರ್ ಅಹಮದ್ ಅಜ್ಮಿ ಮತ್ತು ಸುಧೀರ್ ಸಾವಂತ್ ಅವರ ದೂರಾಗಿದೆ.
ಸುಳ್ಳು ಪ್ರಕರಣಗಳನ್ನು ದಾಖಲಿಸಿದ ಸಂದರ್ಭದಲ್ಲಿ ನಿರಪರಾಧಿ ಎಂದು ಸಮರ್ಥಿಸಿಕೊಳ್ಳಲು ಐಪಿಸಿ ಮತ್ತು ಅಪರಾಧ ಸಂಹಿತೆಯಲ್ಲಿ ಸಾಕಷ್ಟು ಅವಕಾಶಗಳು ಇವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸ್ಫೋಟದ ಪ್ರಕರಣಗಳು ವಿವಿಧ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ ಮತ್ತು ಇನ್ನೂ ಕೆಲವು ಪ್ರಕರಣಗಳನ್ನು ಪೊಲೀಸರು ತನಿಖೆಯನ್ನು ನಡೆಸುತ್ತಿರುವುದರಿಂದ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಈಗಲೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.