ಮುಂಬೈ (ಪಿಟಿಐ): ನಿರ್ಲಕ್ಷ್ಯ ಹಾಗೂ ದುಡುಕಿನ ಚಾಲನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಪೊಲೀಸ್ ವಶಕ್ಕೆ ಒಪ್ಪಿಸಲಾದ ಕೆಲವೇ ತಾಸಿನಲ್ಲಿ ಬಾಲಿವುಡ್ ನಟ ಜಾನ್ ಅಬ್ರಹಾಂ ಜಾಮೀನು ಪಡೆದಿದ್ದಾರೆ.
2006ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ 2010ರ ಅಕ್ಟೋಬರ್ 14ರಂದು ಬಾಂದ್ರಾ ಮೆಟ್ರೊಪಾಲಿಟನ್ ನ್ಯಾಯಾಲಯ ಜಾನ್ ಅವರಿಗೆ 15 ದಿನಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಅದೇ ದಿನ ಅವರು ಜಾಮೀನು ಪಡೆದುಕೊಂಡಿದ್ದರು.
ಶಿಕ್ಷೆಯನ್ನು ಪ್ರಶ್ನಿಸಿ ಜಾನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸೆಷನ್ಸ್ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿತ್ತು. ಅಲ್ಲದೆ, ಶರಣಾಗಲು ಸಮಯಾವಕಾಶ ನೀಡಬೇಕೆಂಬ ನಟನ ಮನವಿಯನ್ನೂ ತಳ್ಳಿಹಾಕಿತ್ತು.
ಆದರೆ ಬಾಂಬೆ ಹೈಕೋರ್ಟ್ ಜಾನ್ ಅವರಿಗೆ ಜಾಮೀನು ನೀಡಿದೆ. ಅಪಘಾತದಲ್ಲಿ ವ್ಯಕ್ತಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಹಾಗಾಗಿ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು ಎಂದು ನ್ಯಾಯಮೂರ್ತಿ ಆರ್.ಸಿ. ಚವಾಣ್ ಆದೇಶ ಹೊರಡಿಸಿದ್ದಾರೆ. 20,000 ರೂಪಾಯಿ ಭದ್ರತಾ ಠೇವಣಿಯೊಂದಿಗೆ ಜಾನ್ ಅವರಿಗೆ ಜಾಮೀನು ನೀಡಲಾಗಿದೆ.
ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ವೇಗವಾಗಿ ಬೈಕ್ನಲ್ಲಿ ಬರುತ್ತಿದ್ದ ಜಾನ್, ಬೈಸಿಕಲ್ಗೆ ಡಿಕ್ಕಿ ಹೊಡೆದಿದ್ದರು. ಆಗ ಶ್ಯಾಮ್ ಕಸಬೆ ಮತ್ತು ತನ್ಮಯ್ ಮಜ್ಹಿ ಎಂಬ ಯುವಕರು ಗಾಯಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.