ನವದೆಹಲಿ: ಉನ್ನತ ನ್ಯಾಯಾಲಯಗಳ ನ್ಯಾಯಮೂರ್ತಿಗಳ ನೇಮಕವನ್ನು ‘ನ್ಯಾಯಮೂರ್ತಿಗಳ ನೇಮಕಾತಿ ಮಂಡಳಿ’ (ಕೊಲಿಜಿಯಂ ಸಿಸ್ಟಂ) ಮಾಡುವುದೇ ಸೂಕ್ತಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಶನಿವಾರ ಪ್ರತಿಪಾದಿಸಿದ್ದಾರೆ. ಆದರೆ, ಈ ವ್ಯವಸ್ಥೆಯನ್ನು ಬದಲಾವಣೆ ಮಾಡುವ ಸಂಬಂಧ ಮಸೂದೆ ರೂಪಿಸುವುದು ಕೇಂದ್ರ ಸರ್ಕಾರದ ವಿವೇಚನೆಗೆ ಬಿಟ್ಟಿದ್ದು' ಎಂದು ಹೇಳಿದ್ದಾರೆ.
‘ಮುಖ್ಯ ನ್ಯಾಯಮೂರ್ತಿ ಆಗಿ ನಾನು ಮಸೂದೆ ಒಳಗೊಂಡಿರುವ ಅಂಶಗಳು ಮತ್ತು ಅದನ್ನು ಅಂಗೀಕರಿಸುವ ವಿಧಾನ ಕುರಿತು ಮಾತನಾಡುವುದಿಲ್ಲ. ಇದು ಸರ್ಕಾರದ ವಿವೇಚನೆಗೆ ಸಂಬಂಧಪಟ್ಟ ವಿಷಯವಾಗಿದ್ದು, ಅದನ್ನು ಒಪ್ಪುವುದು ಅಥವಾ ಬಿಡುವುದು ಜನರಿಗೆ ಬಿಟ್ಟಿದ್ದು. ನ್ಯಾಯಮೂರ್ತಿಗಳ ನೇಮಕಾತಿ ಆಯೋಗ ಕುರಿತು ಈಗಲೇ ಏನೂ ಹೇಳಲಾಗದು’ ಎಂದು ಅವರು ‘ಕಾನೂನು ಪರಮೋಚ್ಚತೆ’ ಕುರಿತ ವಿಚಾರ ಸಂಕಿರಣದಲ್ಲಿ ತಿಳಿಸಿದರು.
ಕೇಂದ್ರ ಸರ್ಕಾರವು ನ್ಯಾಯಾಂಗ ಮತ್ತು ವಕೀಲ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತರಾತುರಿಯಲ್ಲಿ ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಿರುವ ಕುರಿತು ಎತ್ತಿದ ಪ್ರಶ್ನೆಗೆ ಸಂಬಂಧಿಸಿದಂತೆ ಅವರು ತಮ್ಮ ನಿಲುವು ಸ್ಪಷ್ಟಪಡಿಸಿದರು.
ಮಸೂದೆ ಪ್ರತಿಯನ್ನು ಒದಗಿಸುವಂತೆ ಏಪ್ರಿಲ್ 17ರಂದು ಕಾನೂನು ತಜ್ಞರು ಕಾನೂನು ಸಚಿವರಿಗೆ ಪತ್ರ ಬರೆದಿದ್ದಾರೆ. ಆದರೆ, ಅವರಿಂದ ಇದುವರೆಗೆ ಉತ್ತರ ಬಂದಿಲ್ಲ ಎಂದು ಭಾರತೀಯ ವಕೀಲರ ಸಂಘದ ಅಧ್ಯಕ್ಷ ಅನಿಲ್ ದಿವಾನ್ ಆಕ್ಷೇಪ ವ್ಯಕ್ತಪಡಿಸಿದಾಗ ಸದಾಶಿವಂ ಪ್ರತಿಕ್ರಿಯೆ ನೀಡಿದರು. ಈಗಲೂ ಸರ್ಕಾರ ಮತ್ತು ಕಾನೂನು ಇಲಾಖೆ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ `ನ್ಯಾಯಮೂರ್ತಿಗಳ ಸಮಿತಿ'ಗೆ ಸಲಹೆ ಕೊಡುವುದಕ್ಕೆ ಅವಕಾಶವಿದೆ. ಅದರ ಸಲಹೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು.
ಕಾನೂನು ಸಚಿವರು, ಪ್ರಧಾನ ಮಂತ್ರಿ ಹಾಗೂ ರಾಷ್ಟ್ರಪತಿ ಒಪ್ಪಿಗೆ ದೊರೆಯುವವರೆಗೂ ಯಾವುದೇ ಹೆಸರು ಅಂತಿಮಗೊಳ್ಳುವುದಿಲ್ಲ. ಇಡೀ ಪ್ರಕ್ರಿಯೆ ಗುಪ್ತದಳ, ಸಂಬಂಧಪಟ್ಟ ಹೈಕೋರ್ಟ್ ಹಾಗೂ ಪ್ರಮುಖ ಗಣ್ಯರ ಸಲಹೆ, ಅಭಿಪ್ರಾಯಗಳನ್ನು ಆಧರಿಸಿದೆ ಎಂದು ಸದಾಶಿವಂ ವಿವರಿಸಿದರು. ನ್ಯಾಯಾಂಗ ಸರ್ಕಾರದಿಂದ ಪ್ರತ್ಯೇಕವಾಗಿರುವ ವ್ಯವಸ್ಥೆ.
ಇದು ಪ್ರಜಾಪ್ರಭುತ್ವದ ಆತ್ಮ. ನ್ಯಾಯಾಧೀಶರ ಆಯ್ಕೆ, ಶಿಸ್ತು ಮತ್ತು ಪದಚ್ಯತಿಗಳು ಸಂವಿಧಾನದಡಿ ನಡೆಯುವುದರಿಂದ ಹೊಣೆಗಾರಿಕೆ ಸಾಧ್ಯವಾಗಿದೆ. ಸ್ವತಂತ್ರವಾದ, ಪಕ್ಷಪಾತವಿಲ್ಲದ ಶಕ್ತಿಯುತವಾದ ನ್ಯಾಯಾಂಗ ವ್ಯವಸ್ಥೆಯ ಮೇಲೇ ಪ್ರಜಾಪ್ರಭುತ್ವದ ಯಶಸ್ಸು ನಿಂತಿದೆ ಎಂದು ಅವರು ಅಭಿಪ್ರಾಯಪಟ್ಟರು.
ನ್ಯಾಯಾಲಯದ ಪರಮೋಚ್ಚತೆ ಕಾಪಾಡುವ ನಿಟ್ಟಿನಲ್ಲಿ ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ನ್ಯಾಯಾಂಗದ ಹೊಣೆಗಾರಿಕೆ ಅತ್ಯಂತ ಪ್ರಮುಖವಾದ ಅಂಶಗಳು ಎಂದೂ ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.