ನವದೆಹಲಿ: ಕೇರಳ ಲವ್ ಜಿಹಾದ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ‘ಈ ಮದುವೆಗೆ ಹಾದಿಯಾ ಒಪ್ಪಿಗೆ ಇತ್ತೇ ಎಂಬುದು ಮುಖ್ಯ’ ಎಂದು ಹೇಳಿದೆ.
ಮುಂದಿನ ವಿಚಾರಣೆ ನಡೆಯಲಿರುವ ನವೆಂಬರ್ 27ರಂದು ತಮ್ಮ ಮಗಳನ್ನು ನ್ಯಾಯಾಲಯಕ್ಕೆ ಕರೆತರುವಂತೆ ಕೋರ್ಟ್ ಹಾದಿಯಾ ತಂದೆ ಅಶೋಕನ್ ಅವರಿಗೆ ಸೂಚನೆ ನೀಡಿದೆ.
‘ನವೆಂಬರ್ 27ರಂದು ಸಂಜೆ 3 ಗಂಟೆಗೆ ಕೋರ್ಟ್ ಹಾಲ್ನಲ್ಲಿ ನಾವು ಹಾದಿಯಾ ಜತೆಗೆ ಮಾತನಾಡುತ್ತೇವೆ. ಈ ಪ್ರಕರಣದಲ್ಲಿ 24 ವರ್ಷದ ಹಾದಿಯಾ ಹೇಳಿಕೆ ಬಹಳ ಮುಖ್ಯ. ಮದುವೆಗೆ ಹಾದಿಯಾ ಒಪ್ಪಿಗೆ ಇತ್ತೇ ಎಂಬುದು ಆಕೆಯ ಮಾತಿನಿಂದಲೇ ಬಹಿರಂಗವಾಗಬೇಕಿದೆ’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ತಿಳಿಸಿದೆ.
ಹಿಂದೂ ಧರ್ಮದ ಅಖಿಲಾ (ಹಾದಿಯಾ) ಮತ್ತು ಮುಸ್ಲಿಂ ಧರ್ಮದ ಶಫಿನ್ ಜಹಾನ್ ಅವರ ಅಂತರ್ ಧರ್ಮೀಯ ವಿವಾಹ ಅಸಿಂಧು ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿತ್ತು. ಶಫಿನ್ ಜಹಾನ್ ಈ ತೀರ್ಪನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಸುಪ್ರೀಂಕೋರ್ಟ್ನ ನಿರ್ದೇಶನದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಪ್ರಕರಣದ ತನಿಖೆ ನಡೆಸುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.