ನವದೆಹಲಿ (ಐಎಎನ್ಎಸ್): ಮಾಜಿ ಪ್ರಧಾನಿ ನೆಹರೂ ಅವರು ಸರ್ದಾರ್ ವಲ್ಲಬಾಯ್ ಪಟೇಲ್ ಅವರನ್ನು `ಕಟ್ಟಾ ಕೋಮುವಾದಿ' ಎಂದು ಕರೆದಿದ್ದರು ಎಂದು ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಮತ್ತೊಂದು ವಿವಾದದ ಹೇಳಿಕೆ ನೀಡಿದ್ದಾರೆ.
ಇತಿಹಾಸಕಾರ ಎಮ್.ಕೆ.ಕೆ. ನಾಯರ್ ಅವರ ಪುಸ್ತಕವನ್ನು ಉಲ್ಲೇಖಿಸಿ ತಮ್ಮ ಬ್ಲಾಗ್ನಲ್ಲಿ ಈ ಹೇಳಿಕೆಯನ್ನು ಪ್ರಕಟಿಸಿದ್ದಾರೆ.
ಸ್ವಾತಂತ್ರ್ಯ ನಂತರದಲ್ಲಿ ನಿಜಾಮರು ಹೈದರಾಬಾದ್ ಪ್ರಾಂತ್ಯವನ್ನು ಪಾಕಿಸ್ತಾನಕ್ಕೆ ಸೇರಿಸಲು ಒಲವು ತೋರಿದ್ದರು. ಹಾಗಾಗಿ ನಿಜಾಮರು ಅಂದಿನ ಪಾಕ್ ಸರ್ಕಾರಕ್ಕೆ ಸಾಕಷ್ಟು ಹಣ ರವಾನೆ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಪಟೇಲ್ ನೆಹರೂ ಬಳಿ ಮಿಲಿಟರಿ ದಾಳಿಗೆ ಅನುಮತಿ ಕೋರಿದ್ದರು. ಶಾಂತ ಸ್ವಾಭಾವದ ನೆಹರೂ 'ನೀನು ಕಟ್ಟಾ ಕೋಮುವಾದಿ ಈ ಪ್ರಸ್ತಾವನೆಗೆ ನಾನು ಒಪ್ಪಿಗೆ ಸೂಚಿಸುವುದಿಲ್ಲ' ಎಂದು ಹೇಳಿದ್ದರು. ಆಗ ಪಟೇಲರು ಖಾಲಿ ಪೇಪರ್ ಹಿಡಿದು ನೆಹರೂ ಕೊಠಡಿಯಿಂದ ಹೊರ ನಡೆದಿದ್ದರು ಎಂದು ಅಡ್ವಾಣಿ ಉಲ್ಲೇಖಿಸಿದ್ದಾರೆ.
ಕೆಲ ದಿನಗಳ ಹಿಂದೆ ಅತಿ ಎತ್ತರದ ಪಟೇಲ್ ಪ್ರತಿಮೆಯನ್ನು ಅನಾವರಣ ಮಾಡುವ ಸಂದರ್ಭದಲ್ಲಿ ಅಡ್ವಾಣಿ ಅವರು `ದೇಶದಲ್ಲಿ ಪಟೇಲರ ಜಾತ್ಯತೀತತೆಯನ್ನು ಅಳವಡಿಸಿಕೊಳ್ಳಬೇಕೇ ಹೊರತು ಮತಬ್ಯಾಂಕ್ ಜಾತ್ಯತೀತತೆಯನ್ನಲ್ಲಾ' ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.