ADVERTISEMENT

ಪತ್ರಕರ್ತೆಯ ಚೆಂದ ಹೊಗಳಿದ ಸಚಿವ!

ಪಿಟಿಐ
Published 16 ಮಾರ್ಚ್ 2018, 19:30 IST
Last Updated 16 ಮಾರ್ಚ್ 2018, 19:30 IST
ವಿಜಯಶಂಕರ್
ವಿಜಯಶಂಕರ್   

ಚೆನ್ನೈ : ತಮಿಳುನಾಡಿನ ಆರೋಗ್ಯ ಸಚಿವ ಸಿ. ವಿಜಯಶಂಕರ್ ಅವರು ಪತ್ರಕರ್ತೆಯೊಬ್ಬರ ಸೌಂದರ್ಯವನ್ನು ಹೊಗಳಿ ಈಗ ಭಾರಿ ವಿವಾದಕ್ಕೆ ಸಿಲುಕಿದ್ದಾರೆ.

‘ಮೇಡಂ, ಕನ್ನಡಕ ಹಾಕಿಕೊಂಡಿರುವ ನೀವು ನೋಡಲು ಸುಂದರವಾಗಿ ಕಾಣುತ್ತಿದ್ದೀರಿ’ ಎಂದು ಸಚಿವರು ಹೇಳಿರುವ ವಿಡಿಯೊ ‘ಪುದಿಯ ತಲೈಮುರೈ’ ಸೇರಿದಂತೆ ಇತರೆ ಸುದ್ದಿವಾಹಿನಿಯಲ್ಲಿ ಗುರುವಾರ ಪ್ರಸಾರವಾಗಿದೆ.

ಇದೇ ವಾಹಿನಿಯ ಪತ್ರಕರ್ತೆಯು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸದೆ ತಪ್ಪಿಸಿಕೊಳ್ಳುವ ಭರದಲ್ಲಿ ಅವರು ಈ ರೀತಿ ಮಾತನಾಡಿದ್ದಾರೆ. ತಮ್ಮ ಮಾತು ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚೆತ್ತ ಅವರು ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.

ADVERTISEMENT

‘ನನ್ನ ಮಾತನ್ನು ದಯವಿಟ್ಟು ಯಾರೂ ತಪ್ಪಾಗಿ ತಿಳಿದುಕೊಳ್ಳಬೇಡಿ. ನನ್ನನ್ನು ದಯವಿಟ್ಟು ಕ್ಷಮಿಸಿ. ಆಕೆ ನನ್ನ ಸಹೋದರಿ ಇದ್ದ ಹಾಗೆ. ಉದ್ದೇಶಪೂರ್ವಕವಾಗಿ ನಾನು ‘ಸಹೋದರಿ’ಯನ್ನು ಬಣ್ಣಿಸಿಲ್ಲ.

‘ಅವರು ರಾಜಕೀಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಪದೇ ಪದೇ ಕೇಳಿದರು.ಆಗ ನನಗೆ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಎಂದು ತಿಳಿಯಲಿಲ್ಲ. ಸಾಮಾನ್ಯವಾಗಿ ನಾನು ಅಂತಹ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ನನ್ನ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಮಾತ್ರ ಉತ್ತರಿಸುತ್ತೇನೆ. ಆದ್ದರಿಂದ ಅವರು ಪ್ರಶ್ನೆ ಕೇಳಿದಾಗಲೆಲ್ಲಾ ನಾನು ಅವರ ಸೌಂದರ್ಯವನ್ನು ಹೊಗಳಿದೆ.

‘ನನ್ನ ಮಾತಿನಿಂ‌ದ ಅವರಿಗೆ ನೋವಾಯಿತೆಂದು ಕಾಣಿಸುತ್ತದೆ. ಅವರೊಂದಿಗೆ ಮಾತನಾಡಿ ವಿಷಾದ ವ್ಯಕ್ತಪಡಿಸಿದ್ದೇನೆ. ದಯವಿಟ್ಟು ಈ ವಿಷಯವನ್ನು ಯಾರೂ ದೊಡ್ಡದು ಮಾಡಬೇಡಿ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.