ADVERTISEMENT

ಪದ್ಮನಾಭ ದೇಗುಲದಲ್ಲಿ ಲೆಕ್ಕಾಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 19:30 IST
Last Updated 5 ಜುಲೈ 2012, 19:30 IST

ತಿರುವನಂತಪುರ (ಐಎಎನ್‌ಎಸ್): ಇಲ್ಲಿನ ಐತಿಹಾಸಿಕ ಅನಂತಪದ್ಮನಾಭ ದೇಗುಲದ ನೆಲಮಾಳಿಗೆಯಲ್ಲಿರುವ ಚಿನ್ನಾಭರಣಗಳು ಮತ್ತು ಅಪರೂಪದ ಲೋಹಗಳ ಎಣಿಕೆ ಹಾಗೂ ಮೌಲ್ಯ ನಿಗದಿಗೊಳಿಸುವ ಕಾರ್ಯ ಗುರುವಾರದಿಂದ ಆರಂಭವಾಗಿದೆ.

ಸುಪ್ರೀಂ ಕೋರ್ಟ್ ನೇಮಿಸಿರುವ ಎರಡು ಸಮಿತಿಗಳು ಈ ಕಾರ್ಯಕ್ಕೆ ಚಾಲನೆ ನೀಡಿವೆ. ಬುಧವಾರ ದೇವಾಲಯಕ್ಕೆ ಆಗಮಿಸಿದ ಸಮಿತಿಯ ಸದಸ್ಯರು, ನೆಲಮಾಳಿಗೆಯಲ್ಲಿರುವ  `ಎ~ ಕೋಣೆಯೊಳಗಿನ ವಸ್ತುಗಳ ಎಣಿಕೆ ಹಾಗೂ ಮೌಲ್ಯ ನಿಗದಿಪಡಿಸುವ ಪ್ರಕ್ರಿಯೆಗೆ ಯೋಜನೆ ರೂಪಿಸಿದ್ದರು. ನೆಲಮಾಳಿಕೆಯಲ್ಲಿ ಒಟ್ಟು ಆರು ಕೋಣೆಗಳಿವೆ.

ವಸ್ತುಗಳ ಮೌಲ್ಯನಿಗದಿಪಡಿಸಲು ಸಮಿತಿಯ ಸದಸ್ಯರಿಗೆ ಹರಳು ತಜ್ಞರು ನೆರವು ನೀಡುತ್ತಿದ್ದಾರೆ. ಈ ಪ್ರಕ್ರಿಯೆಗಾಗಿ ಜರ್ಮನಿಯಿಂದ ಯಂತ್ರಗಳನ್ನು ತರಿಸಲಾಗಿದೆ.

`ಸಮಿತಿಯು ತಮ್ಮ ದಾಸ್ತಾನು ತಪಾಸಣೆಯ ಮಧ್ಯಂತರ ವರದಿಯನ್ನು ಆಗಸ್ಟ್ 8ರಂದು ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ~ ಎಂದು ಸದಸ್ಯರೊಬ್ಬರು ತಿಳಿಸಿದ್ದಾರೆ. ಎಂ.ವಿ. ನಾಯರ್ ಮತ್ತು ನಿವೃತ್ತ ನ್ಯಾಯಮೂರ್ತಿ ಎಂ.ಎನ್.ಕೃಷ್ಣನ್ ಸುಪ್ರೀಂ ಕೋರ್ಟ್ ನೇಮಿಸಿರುವ ಈ ಸಮಿತಿಗಳ ನೇತೃತ್ವ ವಹಿಸಿದ್ದಾರೆ. ಈ ಸಮಿತಿಗಳಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಗಳು, ತಿರುವಾಂಕೂರು ರಾಜವಂಶದ ಕುಟುಂಬದ ಸದಸ್ಯರು, ದೇವಾಲಯದ ಉಸ್ತುವಾರಿಗಳು ಹಾಗೂ ತಜ್ಞರು ಸದಸ್ಯರಾಗಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ಈ ದೇಗುಲದ ನೆಲಮಾಳಿಗೆಯಲ್ಲಿ ಆರು ಕೋಣೆಗಳು ಪತ್ತೆಯಾಗಿದ್ದವು. `ಬಿ~ ಕೋಣೆಯೊಂದನ್ನು ಹೊರತುಪಡಿಸಿ ಉಳಿದ ಐದು ಕೋಣೆಗಳನ್ನು ತೆರೆದ ಸಮಿತಿಯ ಸದಸ್ಯರು, ಅದರೊಳಗಿನ ವಸ್ತುಗಳ ಮೌಲ್ಯವನ್ನು ಅಂದಾಜಿಸಿದ್ದರು.ಆ ಪ್ರಕಾರ ವಸ್ತುಗಳ ಮೌಲ್ಯ ಒಂದು ಲಕ್ಷ ಕೋಟಿ ರೂಪಾಯಿಯಾಗಿತ್ತು.

ಇತರೆ ಕೋಣೆಗಳಿಗೆ ಹೋಲಿಸಿದರೆ, `ಎ~ ಕೋಣೆಯಲ್ಲಿರುವ ವಸ್ತುಗಳ ಅತ್ಯಂತ ಮಹತ್ವದಾಗಿದ್ದವು. ಕಳೆದ ವರ್ಷ `ಎ~ ಕೋಣೆಯನ್ನು ತೆರೆದಾಗ, ವಜ್ರ, ವೈಢೂರ್ಯ, ಅಮೂಲ್ಯ ದೇವರ ವಿಗ್ರಹಗಳು ಮತ್ತು ಚಿನ್ನದ ನಾಣ್ಯಗಳು ಕೊಠಡಿಯಲ್ಲಿ ಪತ್ತೆಯಾಗಿದ್ದವು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.