ನವದೆಹಲಿ (ಪಿಟಿಐ): ಪರಮಾಣು ಅವಗಡ ಸಂದರ್ಭದ ನಾಗರಿಕ ಹೊಣೆಗಾರಿಕೆ ಕಾಯ್ದೆಯ ಸಂವಿಧಾನಾತ್ಮಕ ಮತ್ತು ಕಾನೂನಿನ ಅಂಶಗಳು ನ್ಯಾಯಾಂಗ ಪರಾಮರ್ಶೆಗೆ ಒಳಪಟ್ಟಿದೆ.
ಈ ಕಾಯ್ದೆಯ ಸಂವಿಧಾನ ಮೂಲಭೂತ ಕಾಯ್ದೆಗೆ ವಿರುದ್ಧವಾಗಿದೆ ಎಂದು ದೂರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಲಾಗಿದ್ದು, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲು ನ್ಯಾಯಪೀಠ ಆದೇಶಿಸಿದೆ.
ಕಾಯ್ದೆಯು ಪರಮಾಣು ಸುರಕ್ಷತೆಯ ಬಗ್ಗೆ ಖಾತರಿ ನೀಡಿಲ್ಲ ಮತ್ತು ಸಂವಿಧಾನದ ಮೂಲಭೂತ ಹಕ್ಕಿಗೆ ವಿರುದ್ಧವಾಗಿದೆ ಎಂಬ ದೂರಿನ ಅರ್ಜಿಯ ವಿಚಾರಣೆಯನ್ನು ಆರಂಭಿಸಿರುವ ಮುಖ್ಯನ್ಯಾಯಮೂರ್ತಿ ಎಸ್. ಎಚ್. ಕಪಾಡಿಯಾ, ನ್ಯಾಯಮೂರ್ತಿಗಳಾದ ಎ. ಕೆ. ಪಟ್ನಾಯಿಕ್ ಮತ್ತು ಸ್ವತಂತ್ರಕುಮಾರ್ ಅವರನ್ನು ಒಳಗೊಂಡ ನ್ಯಾಯಪೀಠವು ಕಾಯ್ದೆಯ ಸಿಂಧುತ್ವದ ಪ್ರಶ್ನೆಯನ್ನು ಮಾತ್ರ ಪರಾಮರ್ಶಿಸಲಾಗುವುದು ಎಂದಿದೆ.
ಪರಮಾಣು ಘಟಕದ ಸುರಕ್ಷತೆ ಮತ್ತು ಇನ್ನಿತರ ತಾಂತ್ರಿಕ ವಿಚಾರಗಳ ಗೋಜಿಗೆ ನಾವು ಹೋಗುವುದಿಲ. ವೈಜ್ಞಾನಿಕ ತಜ್ಞತೆ ಹೊಂದಿರದ ಕಾರಣ ಆ ವಿಚಾರದಲ್ಲಿ ಮಧ್ಯೆ ಪ್ರವೇಶ ಮಾಡುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪರಮಾಣು ಸ್ಥಾವರಕ್ಕೆ ಸರಕು ಸರಬರಾಜು ಮಾಡುವ ಕಂಪೆನಿಗಳ ಗರಿಷ್ಠ ಆರ್ಥಿಕ ಜವಾಬ್ದಾರಿ 1500 ಕೋಟಿ ಎಂದು ಕಾಯ್ದೆಯಲ್ಲಿ ನಿಗದಿಪಡಿಸಿರುವ ಬಗ್ಗೆಯೂ ಅರ್ಜಿ ಸಲ್ಲಿಸಿರುವ ಎನ್ಜಿಒ ಆಕ್ಷೇಪ ವ್ಯಕ್ತಪಡಿಸಿದೆ.
ಪರಮಾಣು ಸ್ಥಾವರಗಳ ಉಸ್ತುವಾರಿಗೆ ಸ್ವಾಯತ್ತ ನಿಯಂತ್ರಣ ಮಂಡಲಿಯನ್ನು ರಚನೆಯನ್ನು ಸಹ ಪ್ರಶ್ನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.