ನವದೆಹಲಿ: ಕುಲಭೂಷಣ್ ಜಾಧವ್ ಅವರ ತಾಯಿ ಆವಂತಿಕಾ ಜಾಧವ್ ಅವರಿಗೆ ವೀಸಾ ನೀಡುವಂತೆ ಪಾಕಿಸ್ತಾನದ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್ ಅವರಿಗೆ ಮಾಡಿದ ಮನವಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಪಾಕಿಸ್ತಾನದ ಸೇನಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿರುವ, ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಅವರು ಪಾಕಿಸ್ತಾನದ ಜೈಲಿನಲ್ಲಿದ್ದಾರೆ. ಅವರನ್ನು ನೋಡುವುದಕ್ಕಾಗಿ ಆವಂತಿಕಾ ಅವರು ವೀಸಾಕ್ಕೆ ಮನವಿ ಮಾಡಿದ್ದಾರೆ.
ವೀಸಾಕ್ಕೆ ಸಂಬಂಧಿಸಿ ಸರ್ತಾಜ್ ಅವರಿಗೆ ಮಾಡಿದ ವೈಯಕ್ತಿಕ ಮನವಿಗೆ ಪ್ರತಿಕ್ರಿಯೆ ನೀಡುವ ಸೌಜನ್ಯವನ್ನೂ ಅವರು ತೋರಿಲ್ಲ ಎಂದು ಸುಷ್ಮಾ ಹೇಳಿದ್ದಾರೆ.
ಭಾರತದಲ್ಲಿ ಚಿಕಿತ್ಸೆ ಪಡೆಯುವುದಕ್ಕಾಗಿ ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ನಿರಾಕರಿಸಿರುವುದಕ್ಕೆ ಇದರೊಂದಿಗೆ ಸಂಬಂಧ ಇದೆ ಎಂಬ ಸುಳಿವನ್ನು ಸುಷ್ಮಾ ನೀಡಿದ್ದಾರೆ.
ಚಿಕಿತ್ಸೆಗಾಗಿ ಪಾಕಿಸ್ತಾನಿ ಮಹಿಳೆಯೊಬ್ಬರಿಗೆ ಭಾರತ ವೀಸಾ ನಿರಾಕರಿಸಿದೆ ಎಂಬ ಮಾಧ್ಯಮ ವರದಿಗಳಿಗೆ ಸುಷ್ಮಾ ಪ್ರತಿಕ್ರಿಯೆ ನೀಡಿದ್ದಾರೆ.
‘ಚಿಕಿತ್ಸೆಗಾಗಿ ವೀಸಾಕ್ಕೆ ಅರ್ಜಿ ಸಲ್ಲಿಸಿರುವವರ ಬಗ್ಗೆ ನನಗೆ ಸಹಾನುಭೂತಿ ಇದೆ. ಆದರೆ ತಮ್ಮದೇ ದೇಶದ ಜನರ ಬಗ್ಗೆ ಸರ್ತಾಜ್ ಅವರು ಅನುಕಂಪ ತೋರಿಸಬೇಕು. ವೈದ್ಯಕೀಯ ವೀಸಾಕ್ಕೆ ಅವರ ಶಿಫಾರಸು ಅಗತ್ಯ’ ಎಂದು ಸುಷ್ಮಾ ಹೇಳಿದ್ದಾರೆ. ‘ತಮ್ಮವರಿಗೆ ವೀಸಾಕ್ಕೆ ಶಿಫಾರಸು ಮಾಡಲು ಪಾಕಿಸ್ತಾನದ ವಿದೇಶಾಂಗ ಸಲಹೆಗಾರರಿಗೆ ಹಿಂಜರಿಕೆ ಯಾಕೆ’ ಎಂದು ಸುಷ್ಮಾ ಪ್ರಶ್ನಿಸಿದ್ದಾರೆ.
ಕುಲಭೂಷಣ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದ ನಂತರ ಪಾಕಿಸ್ತಾನಿ ನಾಗರಿಕರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ವೀಸಾ ನೀಡುವುದನ್ನು ಭಾರತಸರ್ಕಾರ ನಿಲ್ಲಿಸಿದೆ.
ವೈದ್ಯಕೀಯ ವೀಸಾದಅರ್ಜಿಗೆ ಪಾಕಿಸ್ತಾನದ ವಿದೇಶಾಂಗ ಸಲಹೆಗಾರರ ಶಿಫಾರಸು ಬೇಕು ಎಂದು ಭಾರತ ಹೇಳಿದೆ. ಸರ್ತಾಜ್ ಅವರು ಶಿಫಾರಸು ಪತ್ರ ನೀಡದ ಕಾರಣ ವೀಸಾ ನಿರಾಕರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.