ADVERTISEMENT

ಪಿತೃತ್ವ ವಿವಾದ: ತಿವಾರಿ ರಕ್ತದ ಮಾದರಿ ಸಂಗ್ರಹಕ್ಕೆ ಪೊಲೀಸರ ನೆರವು- ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 16 ಮೇ 2012, 19:30 IST
Last Updated 16 ಮೇ 2012, 19:30 IST

ನವದೆಹಲಿ (ಪಿಟಿಐ): ಪಿತೃತ್ವ ವಿವಾದವನ್ನು ಇತ್ಯರ್ಥಪಡಿಸುವುದಕ್ಕಾಗಿ ಕಾಂಗ್ರೆಸ್ ಮುಖಂಡ ಎನ್.ಡಿ. ತಿವಾರಿ ಅವರ ರಕ್ತದ ಮಾದರಿ ಸಂಗ್ರಹಿಸಲು ಪೊಲೀಸರ ನೆರವು ಪಡೆಯುವಂತೆ ದೆಹಲಿ ಹೈಕೋರ್ಟ್ ತನ್ನ ರಿಜಿಸ್ಟ್ರಾರ್‌ಗೆ ಸೂಚಿಸಿದೆ.

`ಒಂದು ವೇಳೆ ಪ್ರತಿವಾದಿ (ತಿವಾರಿ) ಈ ನ್ಯಾಯಾಲಯದ ವ್ಯಾಪ್ತಿಯಲ್ಲಿ ಇಲ್ಲದಿದ್ದರೆ, ಅವರನ್ನು ಕರೆ ತರುವುದಕ್ಕಾಗಿ ಜಂಟಿ ರಿಜಿಸ್ಟ್ರಾರ್ (ಜೆಆರ್)  ಪೊಲೀಸ್ ನೆರವನ್ನು ಪಡೆಯಬಹುದು. ಡಿಎನ್‌ಎ ಪರೀಕ್ಷೆಗಾಗಿ ರಕ್ತದ ಮಾದರಿಯನ್ನು ಸಂಗ್ರಹಿಸಲು ಪ್ರತಿವಾದಿಯನ್ನು ಇಲ್ಲಿಗೆ ಕರೆ ತರಲು ಜೆಆರ್ ಪೊಲೀಸ್ ನೆರವನ್ನು ಕೇಳಬಹುದು~ ಎಂದು ನ್ಯಾಯಮೂರ್ತಿ ಹೇಳಿದರು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ಇನ್ನೂ ಇತ್ಯರ್ಥವಾಗದೇ ಇರುವುದರಿಂದ ಈ ಅರ್ಜಿಯ ವಿಚಾರಣೆ ಮುಂದೂಡಬೇಕು ಎಂದು ಮನವಿ ಮಾಡಿದ ತಿವಾರಿ ಪರ ವಕೀಲರನ್ನು ನ್ಯಾಯಮೂರ್ತಿಗಳು ತೀವ್ರ ತರಾಟೆಗೆ ತೆಗೆದುಕೊಂಡರು.

ADVERTISEMENT

ಅರ್ಜಿಯ ಮುಂದಿನ ವಿಚಾರಣೆಯನ್ನು ಮೇ 21ಕ್ಕೆ ನಡೆಸಲಾಗುವುದು ಎಂದು ತಿಳಿಸಿದ ನ್ಯಾಯಪೀಠ, ತಿವಾರಿ ಅವರ ರಕ್ತದ ಮಾದರಿ ಸಂಗ್ರಹಿಸುವ ದಿನಾಂಕವನ್ನು  ನಿಗದಿ ಪಡಿಸಲು ಜಂಟಿ ರಿಜಿಸ್ಟ್ರಾರ್‌ಗೆ ಸೂಚಿಸಿತು.
ಹೈದರಾಬಾದ್ ಮೂಲದ ಡಿಎನ್‌ಎ ಬೆರಳಚ್ಚು ಮತ್ತು ರೋಗಪತ್ತೆ ಕೇಂದ್ರದಿಂದ (ಸಿಡಿಎಫ್‌ಡಿ) ಡಿಎನ್‌ಎ ಮಾದರಿ ಸಂಗ್ರಹಿಸುವ ಕಿಟ್‌ನ್ನು ಜಂಟಿ ರಿಜಿಸ್ಟ್ರಾರ್ ಪಡೆದ ಬಳಿಕ ಬಂದ ನಂತರ ಒಂದು ವಾರದ ಒಳಗಾಗಿ ತಿವಾರಿ ರಕ್ತ ಮಾದರಿ ಸಂಗ್ರಹಿಸಬೇಕು ಎಂಬುದನ್ನೂ ಪೀಠ ಈ ಸಂದರ್ಭದಲ್ಲಿ ಸ್ಪಷ್ಟ ಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.