ADVERTISEMENT

ಪುರಿ, ಅಹಮದಾಬಾದ್‌ನಲ್ಲಿ ಜಗನ್ನಾಥನ ತೇರು

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 19:59 IST
Last Updated 10 ಜುಲೈ 2013, 19:59 IST

ಪುರಿ (ಪಿಟಿಐ): ವಾರ್ಷಿಕವಾಗಿ ನಡೆಯುವ ಜಗದ್ವಿಖ್ಯಾತ ಪುರಿ ಜಗನ್ನಾಥನ ರಥೋತ್ಸವ ಬುಧವಾರ ಸಂಭ್ರಮದಿಂದ ನೆರವೇರಿತು. ಬಿಹಾರದ ಬೋಧಗಯಾದಲ್ಲಿ ನಡೆದ ಸರಣಿ ಸ್ಫೋಟದ ಹಿನ್ನೆಲೆಯಲ್ಲಿ ರಥೋತ್ಸವಕ್ಕೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ದೇಶದ ವಿವಿಧ ಕಡೆಗಳಿಂದ ಮತ್ತು ವಿದೇಶದಿಂದ ಬಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ಜಗನ್ನಾಥನ ದರ್ಶನ ಪಡೆದರು.
ಬಿಗಿ ಭದ್ರತೆಯನ್ನು ಲೆಕ್ಕಿಸದೆ ಸಾವಿರಾರು ಭಕ್ತರು ಬುಧವಾರ ಬೆಳಿಗ್ಗೆಯಿಂದಲೇ ಪುರಿಯಲ್ಲಿ ಸೇರಿದ್ದರು. ಜಗನ್ನಾಥ, ಅಣ್ಣ ಬಲರಾಮ ಮತ್ತು  ತಂಗಿ ಸುಭದ್ರೆಯ ವಿಗ್ರಹಗಳನ್ನೊಳಗೊಂಡ, ಬಣ್ಣಗಳಿಂದ ಅಲಂಕೃತಗೊಂಡಿದ್ದ ರಥಗಳನ್ನು ಎಳೆದು ಭಕ್ತರು ಸಂಭ್ರಮಿಸಿದರು.

ರಥಯಾತ್ರೆಗೆ ಬಿಗಿ ಭದ್ರತೆ
(ಅಹಮದಾಬಾದ್ ವರದಿ): ನಾಲ್ಕು ಶತಮಾನಗಳ ಇತಿಹಾಸವಿರುವ ಇಲ್ಲಿನ ಪ್ರಸಿದ್ಧ ಜಗನ್ನಾಥ ದೇವಾಲಯದ 136ನೇ ರಥಯಾತ್ರೆ ಬುಧವಾರ ಬಿಗಿ ಭದ್ರತೆಯ ನಡುವೆ  ನಡೆಯಿತು.

ಭದ್ರತೆಗಾಗಿ ಇದೇ ಮೊದಲ ಬಾರಿಗೆ ಧಾರ್ಮಿಕ ಮೆರವಣಿಗೆಯೊಂದರಲ್ಲಿ ಎರಡು ಮಾನವ ರಹಿತ ವೈಮಾನಿಕ ಸಾಧನಗಳನ್ನು (ನೇತ್ರ) ಬಳಕೆ ಮಾಡಲಾಗಿತ್ತು.

ಸಂಪ್ರದಾಯದಂತೆ  ಮೊದಲಿಗೆ ಆನೆಗಳು ಜಗನ್ನಾಥನ ದರ್ಶನ ಪಡೆದು ರಥಯಾತ್ರೆಯ ನೇತೃತ್ವ ವಹಿಸಿದ್ದವು.
ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರು `ಪಹಿಂದ್ ವಿಧಿ' (ಜಗನ್ನಾಥನ ರಥ ಹಾದು ಹೋಗುವ ಬೀದಿಯನ್ನು ಸ್ವಚ್ಛಗೊಳಿಸುವ ಸಾಂಕೇತಿಕ ಕ್ರಿಯೆ) ನೆರವೇರಿಸಿ 14 ಕಿ.ಮೀ ದೂರ ಕ್ರಮಿಸುವ ಜಗನ್ನಾಥ, ಬಲರಾಮ ಮತ್ತು ಸುಭದ್ರೆಯ ರಥಗಳ ಯಾತ್ರೆಗೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.