ಚೆನ್ನೈ (ಪಿಟಿಐ): ಕೂಡುಂಕುಳಂ ಪರಮಣು ವಿದ್ಯುತ್ ಸ್ಥಾವರದ ಬಿಕ್ಕಟ್ಟನ್ನು ಶೀಘ್ರವೇ ಬಗೆಹರಿಸದಿದ್ದಲ್ಲಿ ಪರಮಾಣು ಇಂಧನ ವಿರೋಧಿ ಭಾವನೆ ಹೆಚ್ಚುವ ಸಾಧ್ಯತೆ ಇರುವುದರಿಂದ, ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ರಾಜಕೀಯವಾಗಿ ಸಮಸ್ಯೆ ಬಗೆಹರಿಸಬೇಕು ಎಂದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಒತ್ತಾಯಿಸಿದ್ದಾರೆ.
ಕೂಡುಂಕುಳಂ ವಿದ್ಯತ್ ಸ್ಥಾವರ ಪುನರಾರಂಭಿಸಲು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಜತೆ ಮಾತುಕತೆ ನಡೆಸಿ ರಾಜ್ಯ ಸರ್ಕಾರದ ಸಂಪೂರ್ಣ ಸಹಕಾರ ಪಡೆಯುವುದು ಅಗತ್ಯ ಎಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಸಲಹೆ ನೀಡಿದ್ದಾರೆ.
ವಿದ್ಯುತ್ ಕೊರತೆ ಎದುರಿಸುತ್ತಿರುವ ತಮಿಳುನಾಡಿಗೆ ಸ್ಥಾವರದ ಮೊದಲ ಘಟಕದ ಎಲ್ಲಾ ಒಂದು ಸಾವಿರ ಮೆ. ವಾ. ವಿದ್ಯುತ್ ನೀಡಿ ಎರಡನೇ ಘಟಕ ಆರಂಭವಾದಾಗ ದೇಶದ ಇತರ ಭಾಗಗಳಿಗೆ ಹಂಚಬೇಕೆಂಬ ರಾಜೀ ಸೂತ್ರವನ್ನೂ ಕಲಾಂ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಸ್ಥಾವರದ ಸುರಕ್ಷತೆಗೆ ಎಲ್ಲಾ ಕ್ರಮ ತೆಗೆದುಕೊಳ್ಳಲಾಗಿದ್ದರೂ ಆ ಪ್ರದೇಶದಲ್ಲಿ ಚಳವಳಿ ಮುಂದುವರಿದಿದೆ. ಆದ್ದರಿಂದ ಸ್ಥಳೀಯ ಜನರನ್ನು ತೃಪ್ತಿಪಡಿಸಲು ಇನ್ನೂ ಹೆಚ್ಚಿನ ಕ್ರಮ ಅಗತ್ಯ ಎಂಬುದು ರಾಜ್ಯ ಸರ್ಕಾರ ಭಾವನೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.