ಡೆಹ್ರಾಡೂನ್(ಪಿಟಿಐ): `ಹಿಮಾಲಯದ ಸುನಾಮಿ' ಎಂದೇ ಬಣ್ಣಿಸಲಾದ ಉತ್ತರಾಖಂಡದ ಮಹಾಮಳೆಗೆ ಸಾವಿರಕ್ಕೂ ಹೆಚ್ಚು ಜನ ಕೊಚ್ಚಿಹೋಗಿದ್ದು, ರಕ್ಷಣಾ ಕಾರ್ಯಚರಣೆ ಚುರುಕಿನಿಂದ ನಡೆದಿದೆ. ಸಾವಿನ ಸಂಖ್ಯೆ ಏರುತ್ತಲೇ ಇದೆ. ಶುಕ್ರವಾರ ಹರಿದ್ವಾರದಲ್ಲಿ 40 ಜನರ ಶವ ಪತ್ತೆಯಾಗಿವೆ.
40 ಜನರ ಶವ ಪತ್ತೆಯಾದ ಹಾಗೂ ಇತರ ಕಡೆ ಶವಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸತ್ತವರ ಸಂಖ್ಯೆ 207ಕ್ಕೆ ಏರಿದೆ ಎಂದು ಗೃಹ ಸಚಿವ ಸುಶಿಲ್ ಕುಮಾರ್ ಸಿಂಧೆ ಹೇಳಿದ್ದಾರೆ.
ಕೇದಾರನಾಥ, ಬದರಿನಾಥ ಪ್ರದೇಶದಲ್ಲಿ ಪ್ರವಾಹ ಸಂಕಷ್ಟದಲ್ಲಿ ಸಿಲುಕಿರುವ 250 ಜನರ ಸಂರಕ್ಷಣೆ ಮಾಡಿದ ಹೊರತಾಗಿಯೂ, ಇನ್ನೂ ಅಲ್ಲಲ್ಲಿ ಉಳಿದಿರುವ 9 ಸಾವಿರ ಜನರ ಸಂರಕ್ಷಣೆಗೆ 40 ಹೆಲಿಕಾಪ್ಟರ್ಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಮಹಾಮಳೆಯ `ದುರ್ಘಟನೆ ಅಸಹನೀಯ'ವಾಗಿದೆ ಎಂದು ಉತ್ತರಾಖಂಡದ ಪ್ರಧಾನ ಕಾರ್ಯದರ್ಶಿ ರಾಕೇಶ್ ಶರ್ಮ ಹೇಳಿದ್ದಾರೆ.
ಮುಖ್ಯಮಂತ್ರಿ ಭೇಟಿ
ಶಿಮ್ಲಾ(ಪಿಟಿಐ): ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್ ಮಳೆಯಿಂದ ಭೂ ಕುಸಿತ ಉಂಟಾದ ಪ್ರದೇಶಗಳಿಗೆ ತೆರಳಿ ಸಂತ್ರಸ್ತರನ್ನು ಭೇಟಿ ಮಾಡಿದ್ದಾರೆ.
ಈ ವೇಳೆ ಪುನರ್ವಸತಿ ಕಲ್ಪಿಸುವ ಕುರಿತು ಚರ್ಚೆ ನಡೆಸಿದ್ದಾರೆ.
ಸಂಪರ್ಕ ಕಡಿತ: ವಿದ್ಯುತ್, ಕುಡಿಯುವ ನೀರೂ ಇಲ್ಲ
ಶಿಮ್ಲಾ(ಐಎಎನ್ಎಸ್):
ಹಿಮಾಚಲ ಪ್ರದೇಶದ ಕಿನ್ನೂರು ಜಿಲ್ಲೆ ಮಳೆಯಿಂದ ಉಂಟಾದ ಹಾನಿಗೆ ಎಲ್ಲ ಬಗೆಯ ಸಂಪರ್ಕ ಕಡಿದುಕೊಂಡಿದೆ. ಹೀಗಾಗಿ, ಇಲ್ಲಿನ ಜನ ಜೀವನ ಅಯೋಮಯವಾಗಿದೆ ಎಂದು ಭಾರತೀಯ ಸೇನೆ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದರಿಂದ ಮೊಬೈಲ್ಗಳಿಗೆ ರೀಚಾರ್ಜ್ ಮಾಡಲು ಜನರಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಜನರನ್ನು ಸಂಪರ್ಕಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರೂ ಸಹ ಇಲ್ಲದಂತಾಗಿದೆ ಎಂದು ಅವರು ಹೇಳಿದ್ದಾರೆ.
ದೆಹಲಿ: ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ
ನವದೆಹಲಿ(ಐಎಎನ್ಎಸ್): ನವದೆಹಲಿ ನಗರ ವ್ಯಾಪ್ತಿಯಲ್ಲಿ ಹರಿಯುವ ಯಮುನಾ ನದಿ ಅಪಾಯ ಮಟ್ಟ(204.83 ಮೀ)ಕ್ಕಿಂತ ಕಡಿಮೆ ಇದ್ದು, ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸರ್ಕಾರ ಸೂಚನೆ ನೀಡಿದೆ.
ಅಪಾಯ ಮಟ್ಟ 204.83 ಮೀ. ಇದ್ದು, ಪ್ರಸ್ತುತ ನದಿಯಲ್ಲಿ 204.63 ಮೀ. ನೀರಿನ ಹರಿವು ಇದೆ. ಬುಧವಾರ 207.25 ಮೀ. ಹರಿವು ಇದ್ದ ನದಿಯ ಹರಿವು ತಗ್ಗಿದೆ. 1978ರಲ್ಲಿ ನದಿಯ ನೀರಿನ ಮಟ್ಟ 207.49 ಮೀ. ಅಪಾಯಮಟ್ಟ ತಲುಪಿತ್ತು.
ಬಿಜೆಪಿ ಮುಖಂಡರ ಸಾವು
ಇಂದೋರ್(ಪಿಟಿಐ):
ಉತ್ತರಾಖಂಡದಲ್ಲಿ ಉಂಟಾದ ಪ್ರವಾದಲ್ಲಿ ಇಂದೋರ್ನ ಮೂವರು ಬಿಜೆಪಿ ಮುಖಂಡರು ಸಾವಿಗೀಡಾಗಿದ್ದಾರೆ.
ಪರಿಹಾರಕ್ಕೆ ಸಂಸದರ ವೇತನ, ಅನುದಾನ ಕೊಡುಗೆ: ಸೋನಿಯಾ
ನವದೆಹಲಿ(ಪಿಟಿಐ): ಪ್ರವಾಹದಿಂದ ಸಂತ್ರಸ್ತರಾದವರಿಗೆ ಕಾಂಗ್ರೆಸ್ನ ರಾಜ್ಯಸಭಾ ಮತ್ತು ಸಂಸತ್ನ ಸದಸ್ಯರ ಒಂದು ತಿಂಗಳ ವೇತನ ಮತ್ತು ಅವರ ಅನುದಾನದಲ್ಲಿ ರೂ 10 ಲಕ್ಷವನ್ನು ನೀಡಲಾಗುವುದು ಎಂದು ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂದಿ ಹೇಳಿದ್ದಾರೆ.
ರಾಷ್ಟ್ರದಲ್ಲಿ ಕಾಂಗ್ರೆಸ್ನ 203 ಸಂಸತ್ ಸದಸ್ಯರು, 72 ರಾಜ್ಯಸಭಾ ಸದಸ್ಯರು ಇದ್ದಾರೆ.
ವಿಎಚ್ ಪಿ ನೆರವು
ಡೆಹ್ರಾಡೂನ್(ಪಿಟಿಐ): ಮಹಾಮಳೆಯಿಂದ ಹಾನಿಗೊಳಗಾದ ಪ್ರದೇಶದ ಜನರ ಬದುಕನ್ನು ಪುನರ್ ನಿರ್ಮಿಸಲು ನಿಧಿ ಸಂಗ್ರಹಿಸುವ ಮೂಲಕ ನೆರವು ನೀಡಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ನ ಅಂತರ ರಾಷ್ಟ್ರೀಯ ಕಾರ್ಯಧ್ಯಕ್ಷ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.