ADVERTISEMENT

ಪ್ರಾಮಾಣಿಕ ಕೆಲಸಗಳೂ ಜನರಿಗೆ ಗೊತ್ತಾಗಲಿದೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2010, 9:10 IST
Last Updated 18 ಡಿಸೆಂಬರ್ 2010, 9:10 IST

ನವದೆಹಲಿ(ಪಿಟಿಐ): 2001ರಿಂದ 2008ರ ವರೆಗೆ 2ಜಿ ಸ್ಪೆಕ್ಟ್ರಂ ತರಂಗಾಂತರ ಹಂಚಿಕೆ ಕುರಿತು ತನಿಖೆಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವುದು ‘ಪ್ರಾಮಾಣಿಕ ವ್ಯಕ್ತಿಗಳು ಯಾವ ರೀತಿ ಪ್ರಾಮಾಣಿಕವಾಗಿ ನಿರ್ಧಾರ’ ತೆಗೆದುಕೊಂಡಿದ್ದರು ಎನ್ನುವುದನ್ನು ಬಹಿರಂಗಗೊಳಿಸಲಿದೆ ಎಂದು ಮಾಜಿ ದೂರಸಂಪರ್ಕ ಸಚಿವ ಅರುಣ್ ಶೌರಿ ಹೇಳಿದ್ದಾರೆ.

ಎನ್‌ಡಿಎ ಸರ್ಕಾರದ ಅವಧಿಯಲ್ಲಿ 2003ರ ಜನವರಿಯಿಂದ 2004ರ ಮೇ ತಿಂಗಳ ವರೆಗೆ ಶೌರಿ ದೂರ ಸಂಪರ್ಕ ಇಲಾಖೆಯ ಹೊಣೆ ಹೊತ್ತಿದ್ದರು. ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಸುಪ್ರೀಂ ಕೋರ್ಟ್ ಯಾವ ನಿಗೂಢವನ್ನು ಬಯಲಿಗೆ ತರಲು ಯತ್ನಿಸಿದೆ ಎನ್ನುವುದು ತಿಳಿದಿಲ್ಲ ಎಂದರು. ಆದರೆ ‘ಸುಪ್ರೀಂ ಕೋರ್ಟ್ ನಿರ್ಧಾರದಿಂದ ದೂರ ಸಂಪರ್ಕ ಇಲಾಖೆಯ ನಿರ್ವಹಣೆಯನ್ನು ರಾಜಾ ಒಬ್ಬರೇ ನಡೆಸಿಲ್ಲ ಎನ್ನುವುದನ್ನು ಪ್ರತಿಬಿಂಬಿಸಲು ನಮ್ಮೆಲ್ಲರಿಗೂ ಇದೊಂದು ಅವಕಾಶ’ ಎಂದರು.

ಎನ್‌ಡಿಎ ಸರ್ಕಾರದ ಅವಧಿಯಲ್ಲಿ ದೂರ ಸಂಪರ್ಕ ಇಲಾಖೆಯಲ್ಲಿ ತೆಗೆದುಕೊಂಡ ಅನೇಕ ವಿಷಯಗಳನ್ನು ಈಗಾಗಲೇ ಸುಪ್ರೀಂ ಕೋರ್ಟ್ ಪರಿಶೀಲನೆಗೆ ಒಳಪಡಿಸಿದೆ ಮತ್ತು ಕೆಲವು ವಿಷಯಗಳನ್ನು ಇತ್ಯರ್ಥಪಡಿಸಿದೆ ಎಂದೂ ಶೌರಿ ಹೇಳಿದರು. ಆದರೆ ಸುಪ್ರೀಂ ಕೋರ್ಟಿನ ಈ ನಿರ್ದೇಶನವು ಈ ಹಗರಣದಲ್ಲಿ ರಾಜಾ ಅವರನ್ನು ಶಿಕ್ಷೆಗೆ ಒಳಪಡಿಸಲು ವಿಳಂಬವಾಗಲು ಕಾರಣವಾಗಬಾರದು. ಏಕೆಂದರೆ ರಾಜಾ ವಿರುದ್ಧ ಸಿಬಿಐ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳು ಇವೆ ಎಂದೂ ತಿಳಿಸಿದರು. ಶೌರಿ ಅವರಿಗಿಂತಲೂ ಮುನ್ನ 2001ರಲ್ಲಿ ಪ್ರಮೋದ್ ಮಹಾಜನ್ ಅವರು ದೂರ ಸಂಪರ್ಕ ಸಚಿವರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.