ADVERTISEMENT

ಪ್ರೇಯಸಿಯ ನದಿಗೆ ಎಸೆದ ಪ್ರಿಯಕರ:ಯುವತಿ ಪವಾಡ ಸದೃಶ ಪಾರು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2012, 19:30 IST
Last Updated 7 ಆಗಸ್ಟ್ 2012, 19:30 IST

ಭುವನೇಶ್ವರ: ಇಪ್ಪತ್ತಾಲ್ಕು ವರ್ಷದ ಯುವಕನೊಬ್ಬ 19 ವರ್ಷದ ಪ್ರೇಯಸಿಯನ್ನು ಉಕ್ಕಿ ಹರಿಯುತ್ತಿದ್ದ ನದಿಗೆ ಎಸೆದ ಘಟನೆ ಒಡಿಶಾದಲ್ಲಿ ನಡೆದಿದೆ.ಆದರೆ, ಈ ಘಟನೆಯಲ್ಲಿ ಯುವತಿ ಪವಾಡಸದೃಶವಾಗಿ  ಪಾರಾಗಿದ್ದಾಳೆ.  ಆಕೆಗೆ ಗಂಭೀರ ಗಾಯಗಳಾಗಿವೆ.

ಪಶ್ಚಿಮ ಒಡಿಶಾದ ಬೌದ್ಧ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಯುವತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅವಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.ಯುವತಿ ನೀಡಿರುವ ಹೇಳಿಕೆ ಆಧಾರದಲ್ಲಿ ಪೊಲೀಸರು ಯುವಕ ಹಾಗೂ ಆತನ ಚಿಕ್ಕಪ್ಪನನ್ನು ಬಂಧಿಸಿದ್ದಾರೆ.

ಕಟಕ್ ನಗರದ ಖಾನ್ ನಗರ ಪ್ರದೇಶದ ನಿವಾಸಿಯಾಗಿರುವ ಮಮೀನಾ ಬೆಹೇರಾ (ಹೆಸರು ಬದಲಾಯಿಸಲಾಗಿದೆ) ಮತ್ತು ಬೌದ್ಧ್ ಜಿಲ್ಲೆಯ  ಟುಟುಸಿಂಘ ಗ್ರಾಮದ ರಂಜಿತ್ ಬಾಗ್ ಪರಸ್ಪರ ಪ್ರೀತಿಸುತ್ತಿದ್ದರು.

ಒಂದೂವರೆ ತಿಂಗಳ ಹಿಂದೆ ದೇವಾಲಯಗಳ ಪಟ್ಟಣ ಪುರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇಬ್ಬರಿಗೆ ಪರಿಚಯವಾಗಿತ್ತು. ಶೀಘ್ರವಾಗಿ ಮದುವೆಯಾಗಬೇಕು ಎಂದು ಯುವತಿ ಒತ್ತಾಯ ಮಾಡಲು ಆರಂಭಿಸಿದಾಗ ಇಬ್ಬರ ಸಂಬಂಧದಲ್ಲಿ ಬಿರುಕು ಬಿಟ್ಟಿತ್ತು.

 ಮದುವೆಯಾಗಲು ನಿರಾಕರಿಸಿದರೆ ಪೊಲೀಸರಿಗೆ  ದೂರು ನೀಡುವುದಾಗಿ ಯುವತಿ ಆತನನ್ನು ಬೆದರಿಸಿದ್ದಳು.
ವೃತ್ತಿಯಲ್ಲಿ ಟ್ಯಾಕ್ಸಿ ಚಾಲಕನಾಗಿರುವ ಬಾಗ್, ಕಳೆದ ಭಾನುವಾರ ತನ್ನ ಗ್ರಾಮಕ್ಕೆ ಬರುವಂತೆ  ಪ್ರೇಯಸಿಗೆ ಸೂಚಿಸಿದ್ದ. ಸ್ಥಳೀಯ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ ಬೆಹೇರಾಳನ್ನು ಬಾಗ್ ಟ್ಯಾಕ್ಸಿಯಲ್ಲಿ ತನ್ನ ಗ್ರಾಮದತ್ತ ಕರೆದೊಯ್ದಿದ್ದ.

ದಾರಿ ಮಧ್ಯೆ ಏಕಾಂತ ಸ್ಥಳವೊಂದರಲ್ಲಿ ಬಾಗ್, ಬೆಹೇರಾಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗಿದೆ.  ನಂತರ ಚಿಕ್ಕಪ್ಪ ಮತ್ತು ಸೋದರ ಸಂಬಂಧಿಯ ನೆರವಿನಿಂದ ಆಕೆಯ ಮೇಲೆ ತೀವ್ರ ಹಲ್ಲೆ ನಡೆಸಿ ಭಾರಿ ಮಳೆಯಿಂದಾಗಿ ತುಂಬಿ ಹರಿ ಯುತ್ತಿದ್ದ ಮಹಾನದಿಗೆ ಎಸೆದಿದ್ದ.

ಈಜು ಬರದಿದ್ದ ಯುವತಿ, ಉಕ್ಕಿ ಹರಿಯುತ್ತಿದ್ದ ನೀರಿನ ಸುಳಿಗೆ ಸಿಕ್ಕಿ ಮೂರು ಕಿ.ಮೀ ದೂರದಲ್ಲಿರುವ ಗ್ರಾಮವೊಂದರ ನದಿ ದಂಡೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಳು. ನಂತರ ಗ್ರಾಮಸ್ಥರು ಆಕೆಯನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.