ನವದೆಹಲಿ (ಪಿಟಿಐ): ಬೆಂಗಳೂರು ಮೂಲದ ಹೆಸರಾಂತ ವಿಜ್ಞಾನಿ ಪ್ರೊ. ರೊದ್ದಂ ನರಸಿಂಹ ಸೇರಿದಂತೆ ಹಲವು ಸಾಧಕರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಶನಿವಾರ ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ರೊದ್ದಂ ನರಸಿಂಹ ಮತ್ತು ವರ್ಣಚಿತ್ರಕಾರರೂ ಆದ ದ್ರವ ಚಲನಶಾಸ್ತ್ರ ತಜ್ಞ ಸೈಯದ್ ಹೈದರ್ ರಝಾ ಪದ್ಮ ವಿಭೂಷಣ ಪ್ರಶಸ್ತಿ ಸ್ವೀಕರಿಸಿದರು.
ಪದ್ಮಭೂಷಣ ಪ್ರಶಸ್ತಿಯನ್ನುಬಾಹ್ಯಾಕಾಶ ವಿಜ್ಞಾನಿ ಪ್ರೊ. ಸತ್ಯ ನಧಾಮ್ ಅತ್ಲುರಿ, ವೈದ್ಯಕೀಯ ಸಂಶೋಧಕ ಡಾ. ಮಹರಾಜ್ ಕಿಶನ್ ಭಾನ್, ಉದ್ಯಮಿ ಆದಿ ಗೋದ್ರೆಜ್, ಶಾಸ್ತ್ರೀಯ ಸಂಗೀತಗಾರ ಉಸ್ತಾದ್ ಅಬ್ದುಲ್ ರಶೀದ್ ಖಾನ್, ಶಸ್ತ್ರ ಚಿಕಿತ್ಸಕ ಡಾ. ನಂದಕಿಶೋರ್ ಶಾಮ್ರಾವ್ ಲಾಡ್, ಕವಿ ಹಾಗೂ ಸಂಪಾದಕ ಮಂಗೇಶ್ ಪಡಗಾಂವ್ಕರ್, ವಿಜ್ಞಾನಿಗಳಾದ ಡಾ. ಎ.ಎಸ್. ಪಿಳ್ಳೈ, ಬಿ.ಎನ್.ಸುರೇಶ್, ಭರತನಾಟ್ಯ ಪಟು ಡಾ. ಸರೋಜಾ ವೈದ್ಯನಾಥನ್ ಸ್ವೀಕರಿಸಿದರು.
ಸಾಮಾಜಿಕ ವಿಡಂಬನಾಕಾರ ಜಸ್ಪಾಲ್ ಸಿಂಗ್ ಭಾತಿ ಹಾಗೂ ನಟ ರಾಜೇಶ್ ಖನ್ನಾ ಅವರಿಗೆ ಮರಣೋತ್ತರವಾಗಿ ಪದ್ಮ ಭೂಷಣ ಪ್ರಶಸ್ತಿ ನೀಡಲಾಗಿದ್ದು, ಖನ್ನಾ ಅವರ ಪತ್ನಿ ಡಿಂಪಲ್ ಕಪಾಡಿಯಾ ಪ್ರಶಸ್ತಿ ಸ್ವೀಕರಿಸಿದರು.
ಚಿತ್ರ ನಿರ್ಮಾಪಕ ನಾನಾ ಪಾಟೇಕರ್, ಒಲಿಂಪಿಕ್ನಲ್ಲಿ ಪದಕ ಗೆದ್ದ ಯೋಗೇಶ್ವರ್ ದತ್, ವಿಜಯ್ ಕುಮಾರ್ ಮತ್ತು ಕಲಾವಿದ ರಿತು ಕುಮಾರ್ `ಪದ್ಮಶ್ರೀ' ನೀಡಲಾಯಿತು.
ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾಗಿರುವ ಮಹಿಳಾ ಬಾಕ್ಸರ್ ಎಂ.ಸಿ. ಮೇರಿಕೋಮ್ ಹಾಗೂ ಪ್ರೊ. ಯೋಗೇಶ್ ಚಂದ್ರ ಪಾಟಿ ಅವರು ಸಮಾರಂಭಕ್ಕೆ ಗೈರು ಹಾಜರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.