ನವದೆಹಲಿ: ‘ಚುನಾವಣಾ ಆಯೋಗದ ಸಾಮಾಜಿಕ ಜಾಲತಾಣ ಪಾಲುದಾರನಾಗಿ ಫೇಸ್ಬುಕ್ ಮುಂದುವರಿಯಲಿದೆ’ ಎಂದು ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್ ಹೇಳಿದ್ದಾರೆ.
‘ಚುನಾವಣೆಯ ಉದ್ದೇಶಕ್ಕೆ ಬಳಕೆದಾರರ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡ ಫೇಸ್ಬುಕ್ನ ಬಳಕೆಯನ್ನು ನಿಲ್ಲಿಸುತ್ತೀರಾ’ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಈ ಉತ್ತರ ನೀಡಿದ್ದಾರೆ.
‘ನಾವೂ ಫೇಸ್ಬುಕ್ ಪುಟವೊಂದನ್ನು ಹೊಂದಿದ್ದೇವೆ. ಯಾವುದೋ ಒಂದು ಅಚಾತುರ್ಯ ನಡೆದ ಮಾತ್ರಕ್ಕೆ ಇಂತಹ ಆಧುನಿಕ ತಂತ್ರಜ್ಞಾನದ ಬಳಕೆಯನ್ನೇ ನಿಲ್ಲಿಸುವುದು ಸರಿಯಲ್ಲ. ನಮ್ಮಲ್ಲಿ ಈಚೆಗೆ ಬ್ಯಾಂಕಿಂಗ್ ವಲಯದಲ್ಲಿ ವಂಚನೆ ಹಗರಣಗಳು ಹೆಚ್ಚಾಗುತ್ತಿವೆ. ಹಾಗೆಂದ ಮಾತ್ರಕ್ಕೆ ನಾವೆಲ್ಲಾ ಬ್ಯಾಂಕಿಂಗ್ ವ್ಯವಹಾರಗಳನ್ನು ನಿಲ್ಲಿಸಿದ್ದೇವೆಯೇ’ ಎಂದು ಅವರು ಮರುಪ್ರಶ್ನಿಸಿದ್ದಾರೆ.
‘ನಮ್ಮಲ್ಲಿ ನಡೆಯುವ ಚುನಾವಣೆಗಳ ಮೇಲೆ ಪ್ರಭಾವ ಬೀರುವಂತಹ ಯಾವುದೇ ಯತ್ನಗಳನ್ನು ನಾವು ತಡೆಯುತ್ತೇವೆ. ಈ ಸಂಬಂಧ ಭದ್ರತಾ ಸಂಸ್ಥೆಗಳ ಜತೆ ಈಗಾಗಲೇ ಚರ್ಚೆ ನಡೆಸುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.