ಹೈದರಾಬಾದ್ (ಪಿಟಿಐ): ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷ ಬಂಗಾರು ಲಕ್ಷ್ಮಣ (75) ಅವರು ಹೃದಯಾಘಾತದಿಂದ ಶನಿವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಲಕ್ಷ್ಮಣ ಅವರು ಬಿಜೆಪಿ ಸಂಸದೆ ಸುಶೀಲಾ ಬಂಗಾರು, ಒಬ್ಬ ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ತುರ್ತು ಪರಿಸ್ಥಿತಿ ಕಾಲದಲ್ಲಿ ಜೈಲು ವಾಸ ಅನುಭವಿಸಿದ ಬಂಗಾರು ಲಕ್ಷ್ಮಣ ಯೌವನದಲ್ಲೇ ರಾಜಕೀಯದತ್ತ ಆಕರ್ಷಿತರಾಗಿದ್ದರು. 1996ರಲ್ಲಿ ರಾಜ್ಯಸಭೆ ಸದಸ್ಯರಾಗಿ ಅವರು ಆಯ್ಕೆಯಾದರು.
ಬಂಗಾರು ಲಕ್ಷ್ಮಣ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆ ಅಲಂಕರಿಸಿದ ಮೊದಲ ದಲಿತ ನಾಯಕ. ಶಸ್ತ್ರಾಸ್ತ್ರ ಖರೀದಿ ದಲ್ಲಾಳಿಗಳಿಂದ ಲಂಚ ಪಡೆಯುವುದಕ್ಕೆ ಸಂಬಂಧಿಸಿದಂತೆ ತೆಹೆಲ್ಕಾ 2001ರಲ್ಲಿ ನಡೆಸಿದ ಮಾರುವೇಷದ ಕಾರ್ಯಾಚರಣೆಯಲ್ಲಿ ಬಂಗಾರು ಲಕ್ಷ್ಮಣ ಸಿಕ್ಕಿಬಿದ್ದಿದ್ದರು. ಆಗ ಇದು ಭಾರಿ ಸುದ್ದಿಯಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಿಬಿಐ ನ್ಯಾಯಾಲದಿಂದ ಅವರು ಜೈಲು ಶಿಕ್ಷೆಗೂ ಗುರಿಯಾಗಿದ್ದರು. ಈ ಘಟನೆ ಅವರ ರಾಜಕೀಯ ಜೀವನಕ್ಕೆ ಕಪ್ಪುಚುಕ್ಕೆಯನ್ನಿಟ್ಟಿತ್ತು. ಲಂಚ ಪಡೆದ ಪ್ರಕರಣ ಅಂದಿನ ಎನ್ಡಿಎ ಸರ್ಕಾರಕ್ಕೂ ಮುಜುಗರ ತಂದಿತ್ತು.
ಸಂತಾಪ: ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಸೇರಿದಂತೆ ಪಕ್ಷದ ಇತರ ನಾಯಕರು ಬಂಗಾರು ಲಕ್ಷ್ಮಣ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.