ADVERTISEMENT

ಬಂಗಾರು ಲಕ್ಷ್ಮಣ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2014, 16:37 IST
Last Updated 2 ಮಾರ್ಚ್ 2014, 16:37 IST

ಹೈದರಾಬಾದ್ (ಪಿಟಿಐ): ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷ ಬಂಗಾರು ಲಕ್ಷ್ಮಣ (75) ಅವರು ಹೃದ­ಯಾಘಾತದಿಂದ ಶನಿವಾರ ಇಲ್ಲಿನ ಖಾಸಗಿ ಆಸ್ಪತ್ರೆ­ಯಲ್ಲಿ ನಿಧನ­ರಾದರು.

ಲಕ್ಷ್ಮಣ ಅವರು ಬಿಜೆಪಿ ಸಂಸದೆ ಸುಶೀಲಾ ಬಂಗಾರು, ಒಬ್ಬ ಪುತ್ರ ಮತ್ತು ಮೂವರು ಪುತ್ರಿ­ಯರನ್ನು ಅಗಲಿದ್ದಾರೆ.
ತುರ್ತು ಪರಿಸ್ಥಿತಿ ಕಾಲದಲ್ಲಿ ಜೈಲು ವಾಸ ಅನುಭವಿಸಿದ ಬಂಗಾರು ಲಕ್ಷ್ಮಣ ಯೌವನದಲ್ಲೇ ರಾಜಕೀಯದತ್ತ ಆಕ­ರ್ಷಿ­ತ­ರಾಗಿದ್ದರು. 1996ರಲ್ಲಿ ರಾಜ್ಯ­ಸಭೆ ಸದಸ್ಯರಾಗಿ ಅವರು ಆಯ್ಕೆ­ಯಾದರು.

ಬಂಗಾರು ಲಕ್ಷ್ಮಣ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆ ಅಲಂಕರಿಸಿದ ಮೊದಲ ದಲಿತ ನಾಯಕ. ಶಸ್ತ್ರಾಸ್ತ್ರ ಖರೀದಿ ದಲ್ಲಾಳಿಗಳಿಂದ ಲಂಚ ಪಡೆಯುವುದಕ್ಕೆ ಸಂಬಂಧಿಸಿ­ದಂತೆ ತೆಹೆಲ್ಕಾ 2001ರಲ್ಲಿ ನಡೆಸಿದ ಮಾರು­ವೇಷದ ಕಾರ್ಯಾಚರಣೆ­ಯಲ್ಲಿ ಬಂಗಾರು ಲಕ್ಷ್ಮಣ ಸಿಕ್ಕಿಬಿದ್ದಿದ್ದರು. ಆಗ ಇದು ಭಾರಿ ಸುದ್ದಿಯಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಿಬಿಐ ನ್ಯಾಯಾಲದಿಂದ ಅವರು ಜೈಲು ಶಿಕ್ಷೆಗೂ ಗುರಿಯಾಗಿದ್ದರು. ಈ ಘಟನೆ ಅವರ ರಾಜಕೀಯ ಜೀವನಕ್ಕೆ ಕಪ್ಪು­ಚುಕ್ಕೆಯನ್ನಿಟ್ಟಿತ್ತು. ಲಂಚ ಪಡೆದ ಪ್ರಕ­ರಣ ಅಂದಿನ ಎನ್‌ಡಿಎ ಸರ್ಕಾರಕ್ಕೂ ಮುಜುಗರ ತಂದಿತ್ತು.
ಸಂತಾಪ: ಬಿಜೆಪಿ ಅಧ್ಯಕ್ಷ ರಾಜನಾಥ್‌ ಸಿಂಗ್‌ ಸೇರಿದಂತೆ ಪಕ್ಷದ ಇತರ ನಾಯಕರು ಬಂಗಾರು ಲಕ್ಷ್ಮಣ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.