ADVERTISEMENT

ಬಜೆಟ್ ಅಧಿವೇಶನ: ಪ್ರತಿಪಕ್ಷಗಳ ದಾಳಿಗೆ ಸಮರ್ಥ ಉತ್ತರ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಬಜೆಟ್ ಅಧಿವೇಶನದಲ್ಲಿ 2ಜಿ ತರಂಗಾಂತರ ಹಂಚಿಕೆ ಹಗರಣ ಮುಂದಿಟ್ಟುಕೊಂಡು ಸರ್ಕಾರವನ್ನು ಹಣಿಯಲು ಪ್ರತಿಪಕ್ಷಗಳು ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಸಮರ್ಥವಾಗಿ ಎದುರಿಸಲು ಪ್ರಧಾನಮಂತ್ರಿಗಳ ಕಾರ್ಯಾಲಯ ಸಿದ್ಧತೆ ನಡೆಸಿದೆ.  ಹಗರಣದ ಸಂಪೂರ್ಣ ವಿವರ ನೀಡುವಂತೆ ಟಲಿಕಾಂ ಇಲಾಖೆಗೆ ಸೂಚಿಸಿದೆ.

2ಜಿ ವಿಷಯದಲ್ಲಿ ಮಹಾಲೇಖಪಾಲರು ನೀಡಿರುವ ವರದಿ ಸೇರಿದಂತೆ ಮಾಜಿ ಸಚಿವ ದಯಾನಿಧಿ ಮಾರನ್ ವಿರುದ್ಧದ ಆಪಾದನೆ ಕುರಿತು ಮಾಹಿತಿ ನೀಡುವಂತೆ ದೂರ ಸಂಪರ್ಕ ಇಲಾಖೆಗೆ  ನಿರ್ದೇಶಿಸಿದೆ.

ಈ ಹರಗಣ ಮತ್ತು ದೂರ ಸಂಪರ್ಕ ನೀತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಮುಖ ಪ್ರಕರಣಗಳ ಬಗ್ಗೆಯೂ ಪಿಎಂಒ ವಿವರ ಬಯಸಿದೆ ಎಂದು ಮೂಲಗಳು ತಿಳಿಸಿವೆ.

ತರಂಗಾಂತರ ಹಂಚಿಕೆ, ತರಂಗಾಂತರದಲ್ಲಿ ಪಾಲುದಾರಿಕೆ ಮತ್ತು ಈ ಬಗ್ಗೆ ಟ್ರಾಯ್ (ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ) ಮಾಡಿದ್ದ ಶಿಫಾರಸುಗಳ ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ಪಿಎಂಒ ಸೂಚಿಸಿದೆ ಮೂಲಗಳು ಹೇಳಿವೆ.

ಪ್ರಮುಖ ಪ್ರತಿಪಕ್ಷ ಬಿಜೆಪಿ ಮತ್ತು ಎಡರಂಗಗಳು 2ಜಿ ಹಗರಣವೇ ಬಜೆಟ್ ಅಧಿವೇಶನದ ಪ್ರಮುಖ ವಿಷಯ ಎಂದು  ಸ್ಪಷ್ಟ ಪಡಿಸಿವೆ.

 ಎ.ರಾಜಾ ಸಚಿವರಾಗಿದ್ದ ಅವಧಿಯಲ್ಲಿ ಮಂಜೂರು ಮಾಡಲಾದ 122 ಪರವಾನಗಿಯನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳದೇ ಬಿಡುವುದಿಲ್ಲ ಎಂದು ಆ ಪಕ್ಷಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.