ನವದೆಹಲಿ: ಮೂರು ವರ್ಷಗಳ ಹಿಂದೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ಅಪಹರಿಸಿದ್ದ 39 ಭಾರತೀಯರನ್ನು ವಾಯವ್ಯ ಮೋಸುಲ್ನ ಬದುಶ್ ಜೈಲಿನಲ್ಲಿಟ್ಟಿರುವ ಸಾಧ್ಯತೆ ಇದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಭಾನುವಾರ ಹೇಳಿದ್ದಾರೆ.
ಇದೇ 24ರಂದು ಇರಾಕ್ ವಿದೇಶಾಂಗ ವ್ಯವಹಾರಗಳ ಸಚಿವ ಇ್ರಬಾಹಿಂ ಅಲ್ ಜಾಫರಿ ಭಾರತಕ್ಕೆ ಭೇಟಿ ನೀಡಲಿದ್ದು, ಅಪಹರಣಕ್ಕೊಳಗಾದ ಭಾರತೀಯರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅವರು ನೀಡಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಆಸ್ಪತ್ರೆ ನಿರ್ಮಾಣ ಕೆಲಸಕ್ಕೆ ಭಾರತೀಯರನ್ನು ನಿಯೋಜಿಸಲಾಗಿತ್ತು. ಬಳಿಕ ಅವರನ್ನು ಕೃಷಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿಂದ ಅವರನ್ನು ಪಶ್ಚಿಮ ಮೋಸುಲ್ನ ಬದುಶ್ ಜೈಲಿಗೆ ಕರೆದುಕೊಂಡು ಹೋಗಲಾಗಿದೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಅಲ್ಲಿಯ ಅಧಿಕಾರಿಗಳು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರಿಗೆ ಮಾಹಿತಿ ನೀಡಿದ್ದಾರೆ ಎಂದಿದ್ದಾರೆ.
ಪೂರ್ವ ಮೋಸುಲ್ ನಗರವನ್ನು ಐಎಸ್ ಹಿಡಿತದಿಂದ ಸ್ವತಂತ್ರಗೊಳಿಸಲಾಗಿದೆ. ಅಲ್ಲಿಯ ಕಟ್ಟಡಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಬಾಂಬ್ ಅಥವಾ ಇತರ ಸ್ಫೋಟಕಗಳು ಇರಬಹುದು ಎನ್ನುವ ಕಾರಣದಿಂದಾಗಿ ಅಲ್ಲಿಗೆ ಹೋಗಲು ನಾಗರಿಕರಿಗೆ ಅವಕಾಶ ನೀಡುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಮೋಸುಲ್ನಲ್ಲಿ 2014ರ ಜೂನ್ನಲ್ಲಿ ಐಎಸ್ ಉಗ್ರರು ಭಾರತೀಯರನ್ನು ಅಪಹರಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.