ನವದೆಹಲಿ: ಗುರುಗ್ರಾಮದ ರಾಯನ್ ಇಂಟರ್ನ್ಯಾಷನಲ್ ಶಾಲೆಯ ಏಳು ವರ್ಷದ ಬಾಲಕ ಪ್ರಧ್ಯುಮನ್ ಠಾಕೂರ್ ಅಮಾನುಷ ಹತ್ಯೆಗೆ ಶಾಲೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಸಿಬಿಎಸ್ಇ ಸುಪ್ರೀಂ ಕೋರ್ಟ್ಗೆ ಗುರುವಾರ ತಿಳಿಸಿದೆ. ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗೆ ಮೀಸಲಾದ ಶಾಲಾ ಶೌಚಾಲಯವನ್ನು ವಾಹನ ಚಾಲಕರು, ನಿರ್ವಾಹಕರಿಗೆ ಬಳಸಲು ಬಿಟ್ಟಿದ್ದೇ ಈ ಕೊಲೆಗೆ ಕಾರಣ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೆ ಈ ಕೊಲೆ ಬಗ್ಗೆ ಶಾಲಾ ಆಡಳಿತ ಮಂಡಳಿಯು ಪೊಲೀಸರಿಗೆ ತಿಳಿಸಲಿಲ್ಲ, ಬದಲಾಗಿ ಆತನ ಪೋಷಕರು ಎಫ್ಐಆರ್ ದಾಖಲಿಸಿದರು ಎಂದು ಸಿಬಿಎಸ್ಇ ತಿಳಿಸಿದೆ.
ಸೆ. 8ರಂದು ಶಾಲಾ ಶೌಚಾಲಯದಲ್ಲಿ ಬಾಲಕನ ಕೊಲೆ ನಡೆದಿದ್ದು, ಹರಿತವಾದ ಆಯುಧದಿಂದ ಆತನ ಕುತ್ತಿಗೆ ಸೀಳಲಾಗಿತ್ತು. ಸಲಿಂಗರತಿಗೆ ಬಾಲಕ ಒಪ್ಪದ ಕಾರಣ 42 ವರ್ಷದ ಶಾಲಾ ವಾಹನ ಚಾಲಕ ಅಶೋಕ್ ಕುಮಾರ್ ಈ ಕೃತ್ಯ ಎಸಗಿದ್ದ ಎಂದು ಆರೋಪಿಸಲಾಗಿದೆ.
ಶಾಲಾ ಆವರಣಕ್ಕೆ ಹೊರಗಿನವರ ಪ್ರವೇಶ ನಿಷೇಧ
ನವದೆಹಲಿ: ರಾಜಧಾನಿ ವ್ಯಾಪ್ತಿಯಲ್ಲಿ ಶಾಲಾ ಆವರಣಕ್ಕೆ ಹೊರಗಿನವರು ಪ್ರವೇಶಿಸದಂತೆ ಮತ್ತು ಉಳಿದುಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ದೆಹಲಿ ಸರ್ಕಾರ ನಿರ್ದೇಶನ ನೀಡಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಈ ನಿರ್ದೇಶನ ಹೊರಡಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.