ADVERTISEMENT

ಬಾಲಕಿ ಮೇಲೆ ಗುಂಡು ಹಾರಿಸಿದ ಭಗ್ನಪ್ರೇಮಿ

ಪ್ರೀತಿಸಲು ನಿರಾಕರಿಸಿದ್ದಕ್ಕೆ ದುಡುಕಿದ ಯುವಕ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 19:59 IST
Last Updated 3 ಸೆಪ್ಟೆಂಬರ್ 2013, 19:59 IST

ಲಖನೌ (ಐಎಎನ್‌ಎಸ್): ಪ್ರೀತಿಸಲು ನಿರಾಕರಿಸಿದಕ್ಕೆ ಯುವಕನೊಬ್ಬ ಶಾಲಾ ಕೊಠಡಿಯಲ್ಲೇ ಬಾಲಕಿ ಮೇಲೆ ಗುಂಡು ಹಾರಿಸಿ, ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

19 ವರ್ಷದ ದುರ್ಗೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಗಂಭೀರವಾಗಿ ಗಾಯಗೊಂಡಿರುವ 15 ವರ್ಷದ ಬಾಲಕಿಯನ್ನು ಲಖನೌ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾಳೆ.

ಘಟನೆ ಹಿನ್ನೆಲೆ: ಗೀರ್‌ಧರಿಪೂರ್ವ ಗ್ರಾಮದ ದುರ್ಗೇಶ್ ಎಂಬ ಯುವಕ ಹಲವು ದಿನಗಳಿಂದ ಅದೇ ಗ್ರಾಮದ ಬಾಲಕಿಯನ್ನು ಮನದೊಳಗೆ ಪ್ರೀತಿಸುತ್ತಿದ್ದ. ಬಾಲಕಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಬಾಲಕಿ ಅದನ್ನು ತಿರಸ್ಕರಿಸಿದ್ದಳು. ಈ ವಿಷಯ ತಿಳಿದ ಆಕೆಯ ಪೋಷಕರು ಇದಕ್ಕೆ ಹಲವು ಬಾರಿ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ದುರ್ಗೇಶ್ ಮಾತ್ರ ತನ್ನ ಚಾಳಿ ಬಿಟ್ಟಿರಲಿಲ್ಲ.

ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಬಾಲಕಿ ಎಂದಿನಂತೆ ಶಾಲೆಗೆ ಹೋಗಿದ್ದಳು. ಇದನ್ನು ತಿಳಿದ ದುರ್ಗೇಶ್, ಬಾಲಕಿಯ ಶಾಲಾ ಕೊಠಡಿಗೆ ನುಗ್ಗಿ ಬಲವಂತವಾಗಿ ಆಕೆಯ ಕೈಹಿಡಿದು ಹೊರಗೆ ಬರುವಂತೆ ಹೇಳಿದ್ದಾನೆ. ಆದರೆ, ಬಾಲಕಿ ಆತನ ಮಾತಿಗೆ ಕಿವಿಗೊಡಲಿಲ್ಲ. ಇದರಿಂದ ಸಿಟ್ಟಿಗೆದ್ದ ದುರ್ಗೇಶ್ ಪಾಲಿಥೀನ್ ಬ್ಯಾಗ್‌ನಲ್ಲಿ ತಂದಿದ್ದ ಎರಡು ನಾಡ ಪಿಸ್ತೂಲ್‌ಗಳ ಪೈಕಿ ಒಂದನ್ನು ಹೊರತೆಗೆದು ಬಾಲಕಿ ಮೇಲೆ ಗುಂಡು ಹಾರಿಸಿದ್ದಾನೆ. ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲೇ ಈ ಕೃತ್ಯ ಎಸಗಿದ್ದಾನೆ.

ಬಳಿಕ ಸಮೀಪದ ದೇವಸ್ಥಾನದಲ್ಲಿ ಇನ್ನೊಂದು ಪಿಸ್ತೂಲ್‌ನಿಂದ ತಾನೇ ಗುಂಡು ಹೊಡೆದುಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ತಕ್ಷಣವೇ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.