ADVERTISEMENT

ಬಿಜೆಪಿ: ಚುನಾವಣಾ ಸುಧಾರಣೆ ಸಮಿತಿ ನೇಮಕ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 18:00 IST
Last Updated 15 ಫೆಬ್ರುವರಿ 2011, 18:00 IST

ನವದೆಹಲಿ (ಪಿಟಿಐ): ವಿದ್ಯುನ್ಮಾನ ಮತಯಂತ್ರ, ರಾಜಕೀಯದಲ್ಲಿ ಅಪರಾಧೀಕರಣ ಮತ್ತಿತರ ವಿಚಾರಗಳ ಬಗ್ಗೆ ಗಮನ ಹರಿಸಿ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸುವ ಸಲುವಾಗಿ ಬಿಜೆಪಿಯು ಚುನಾವಣಾ ಸುಧಾರಣೆ ಸಮಿತಿಯೊಂದನ್ನು ರಚಿಸಿದೆ.

ಪಕ್ಷದ ಉಪಾಧ್ಯಕ್ಷ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಸಮಿತಿಯ ಸಂಚಾಲಕರಾಗಿರುತ್ತಾರೆ. ಚುನಾವಣೆಗೆ ಸುಧಾರಣೆ ಸಂಬಂಧಿಸಿದಂತೆ ಸಮಿತಿ ಸಮಗ್ರ ವರದಿ ತಯಾರಿಸಲಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮಂಗಳವಾರ ಇಲ್ಲಿ ಪ್ರಕಟಿಸಿದರು.

ಪಕ್ಷದ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರು ಸಮಿತಿಗೆ ಮಾರ್ಗದರ್ಶನ ನೀಡಲಿದ್ದಾರೆ. ಸಮಿತಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಥವಾರ್ ಚಂದ್ರ ಗೆಹ್ಲೋಟ್, ಕಾರ್ಯದರ್ಶಿ ಕಿರಿಟ್ ಸೋಮಯ್ಯ, ಪಕ್ಷದ ಉತ್ತರ ಪ್ರದೇಶ ಘಟಕದ ಮಾಜಿ ಅಧ್ಯಕ್ಷ ರಾಮಪತಿ ರಾಮ್ ತ್ರಿಪಾಠಿ, ಸತ್ಯಪಾಲ ಜೈನ್, ಭನ್ವಾರಿ ಲಾಲ್ ಪುರೋಹಿತ್, ಜಿ. ವಿ. ಎಲ್. ನರಸಿಂಹ ರಾವ್ ಮತ್ತು ರಾಮಕೃಷ್ಣ ಅವರು ಇದ್ದಾರೆ.

ಸಮಿತಿಯು ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ವಿಶೇಷ ಗಮನ ಹರಿಸಲಿದೆ. ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವಾಗುವುದಕ್ಕೆ ಪಕ್ಷ ಬೆಂಬಲ ನೀಡಿತ್ತು. ಲೋಕಸಭೆಯಲ್ಲೂ ಇದು ಅಂಗೀಕಾರವಾಗುವಂತೆ ಮಾಡಲು ಸಮಿತಿ ಪ್ರಯತ್ನಿಸಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.