ಪಟ್ನಾ (ಐಎಎನ್ಎಸ್): ಭಾರಿ ಮಳೆಯಿಂದಾಗಿ ಗಂಗಾ ಮತ್ತು ಸೋನೆ ನದಿಗಳ ನೀರಿನ ಮಟ್ಟ ಏರಿದ ಪರಿಣಾಮ ಬಿಹಾರದಲ್ಲಿ ಸೋಮವಾರ ಪ್ರವಾಹ ಪರಿಸ್ಥಿತಿ ಕಳವಳಕಾರಿಯಾಗಿದ್ದು ನೂರಾರು ಗ್ರಾಮಗಳು ಜಲಾವೃತವಾಗಿದ್ದು ಸಾವಿರಾರು ಮಂದಿ ನೀರಿನ ಮಧ್ಯೆ ಸಿಲುಕಿದ್ದಾರೆ.
ಮಧ್ಯಪ್ರದೇಶದ ಬನ್ಸಾಗರ್ ಜಲಾಶಯ ಮತ್ತು ಉತ್ತರ ಪ್ರದೇಶದ ರಿಹ್ಯಾಂಡ್ ಜಲಾಶಯದಿಂದ ಸುಮಾರು 10 ಲಕ್ಷ ಕ್ಯುಸೆಕ್ ನೀರನ್ನು ದಿಢೀರ್ ಬಿಟ್ಟಿದ್ದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.
ಬಿಹಾರ ಸರ್ಕಾರ ರಾಷ್ಟ್ರೀಯ ಪ್ರಕೃತಿ ವಿಕೋಪ ಪ್ರಕ್ರಿಯೆ ತಂಡಗಳನ್ನು ನೀರಿನ ಮಧ್ಯೆ ಸಿಲುಕಿರುವ ಗ್ರಾಮಸ್ಥರನ್ನು ರಕ್ಷಿಸಲು ಆಯೋಜಿಸಿದೆ.
ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನ ಎತ್ತರ ಪ್ರದೇಶಗಳಿಗೆ ಹೋಗುವಂತೆ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣೆ ಇಲಾಖೆ ತಿಳಿಸಿದೆ ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿ ವ್ಯಾಸ್ ಜಿ ಹೇಳಿದ್ದಾರೆ.
12 ಜಿಲ್ಲೆಗಳ ಸುಮಾರು ಐದು ಲಕ್ಷ ಮಂದಿ ಪ್ರವಾಹದಿಂದ ತೊಂದರೆಗೆ ಈಡಾಗಿದ್ದಾರೆ ಎಂದು ಇಲಾಖೆ ತಿಳಿಸಿದೆ.
ರೊಹಟಾಸ್, ಔರಂಗಾಬಾದ್, ಅರ್ವಾಲ್, ಪಟ್ನಾ, ಭೋಜ್ಪುರ, ಸರನ್, ವೈಶಾಲಿ ಜಿಲ್ಲೆಗಳಲ್ಲಿ ಗ್ರಾಮಗಳು ನೀರಿನಿಂದ ಆವೃತ್ತಗೊಂಡಾಗ ನೂರಾರು ಮಂದಿ ತಮ್ಮ ಮನೆಗಳನ್ನು ಬಿಟ್ಟು ಓಡಿಹೋಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕ್ಟೋಬರ್ 15 ರವರೆಗೆ ಸರ್ಕಾರ ಜಲಸಂಪನ್ಮೂಲ ಇಲಾಖೆಯ ಎಲ್ಲಾ ಎಂಜಿನಿಯರುಗಳ ರಜೆಯನ್ನು ರದ್ದು ಮಾಡಲಾಗಿದೆ.
ಜಿಲ್ಲಾ ಆಡಳಿತ ತೀವ್ರ ನಿಗಾದಲ್ಲಿ ಇರಬೇಕೆಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಸೊನೆ ನದಿಯ ಪಟ್ನಾ ಮತ್ತು ಅರಾ ಕಾಲುವೆಗಳನ್ನು ಮುಚ್ಚಲಾಗಿದೆ.
1975ರಿಂದ ಈಚೆಗೆ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಿಂದ ಸೊನೆಗೆ ಈ ಮಟ್ಟದಲ್ಲಿ ನೀರನ್ನು ಬಿಟ್ಟಿರಲಿಲ್ಲ ಎಂದು ಜಲ ಸಂಪನ್ಮೂಲ ಇಲಾಖೆ ತಿಳಿಸಿದೆ.
ರಾಜ್ಯ ಸರ್ಕಾರ ಈ ಎರಡು ರಾಜ್ಯಗಳ ಕ್ರಮದ ವಿರುದ್ಧ ತೀವ್ರ ಖಂಡನೆ ಮಾಡಿದೆ ಎಂದು ಬಿಹಾರ ಜಲ ಸಂಪನ್ಮೂಲ ಸಚಿವ ವಿಜಯ್ ಕುಮಾರ್ ಚೌಧರಿ ಹೇಳಿದ್ದಾರೆ.
ಬಿಹಾರದಲ್ಲಿ ಎಲ್ಲಾ ಪ್ರಮುಖ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದೆ ಎಂದು ಕೇಂದ್ರ ಜಲ ಆಯೋಗ ತಿಳಿಸಿದೆ.
ಗಂಗಾ ಮತ್ತು ಸೊನೆ ನದಿಗಳು ದಿಢೀರನೆ ವ್ಯಾಪಕ ಹಾನಿ ಮಾಡುತ್ತಿರುವುದು 20 ದಿನಗಳಲ್ಲಿ ಇದು ಎರಡನೇ ಬಾರಿ .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.