ADVERTISEMENT

ಬೀದಿಬದಿ ವ್ಯಾಪಾರಕ್ಕೆ ಕಾನೂನಿನ ರಕ್ಷಣೆ

ಲೋಕಸಭೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 19:59 IST
Last Updated 6 ಸೆಪ್ಟೆಂಬರ್ 2013, 19:59 IST

ನವದೆಹಲಿ:  ಬೀದಿಬದಿಯ ವ್ಯಾಪಾರಿಗಳನ್ನು ನಿಂತ್ರಿಸುವ ಹಾಗೂ ಅವರ ಜೀವನೋಪಾಯದ ಹಕ್ಕುಗಳನ್ನು ರಕ್ಷಿಸುವ ಮಹತ್ವದ ಮಸೂದೆಯನ್ನು ಶುಕ್ರವಾರ ಲೋಕಸಭೆಯಲ್ಲಿ ಅವಿರೋಧವಾಗಿ ಅಂಗೀಕರಿಸಲಾಯಿತು.

`ಬೀದಿ ಬದಿಯ ವ್ಯಾಪಾರ ಮತ್ತು ನಗರಗಳ ಬೀದಿ ಬದಿಯ ವರ್ತಕರ ಜೀವನೋಪಾಯ ಹಕ್ಕುಗಳ ರಕ್ಷಣಾ ಮಸೂದೆ-2012'ಯನ್ನು ವಸತಿ ಮತ್ತು ಬಡತನ ನಿರ್ಮೂಲನಾ ಸಚಿವೆ ಡಾ. ಗಿರಿಜಾ ವ್ಯಾಸ್ ಮಂಡಿಸಿದರು.

`ಇನ್ನು ಮುಂದೆ ಬೀದಿ ಬದಿಯ ವರ್ತಕರು ಯಾರ ಹಂಗೂ, ಇಲ್ಲದೇ ಮುಕ್ತವಾಗಿ ವ್ಯಾಪಾರ ನಡೆಸಬಹುದು. ಯಾವುದೇ ಅಂಜು, ಅಳಕು ಇಲ್ಲದೇ ಧೈರ್ಯವಾಗಿ ಜೀವನ ನಡೆಸಲು ಈ ಮಸೂದೆ ಅವಕಾಶ ಕಲ್ಪಿಸಲಿದೆ' ಎಂದು ಭರವಸೆ ನೀಡಿದರು.

ಪರವಾನಗಿ ಪಡೆದ ಬೀದಿ ಬದಿಯ ವರ್ತಕರನ್ನು ಸ್ಥಳದಿಂದ ತೆರವುಗೊಳಿಸಲೂ ಸಾಧ್ಯವಿಲ್ಲ. ಪೊಲೀಸರು ಅಥವಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಅವರಿಗೆ ಅನಗತ್ಯ ಕಿರುಕುಳ ನೀಡಲಾರರು ಎಂದು ಅವರು ಸ್ಪಷ್ಟಪಡಿಸಿದರು.

ತಮ್ಮ ನೋವುಗಳನ್ನು ವ್ಯಕ್ತಪಡಿಸಲಾಗದ ದುರ್ಬಲ ವರ್ತಕರ ಹಕ್ಕುಗಳನ್ನು ರಕ್ಷಿಸಲು ಈ ಮಸೂದೆ ನೆರವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು. ದೇಶದ ಶೇ 2 ರಷ್ಟು ಜನರು ಬೀದಿ ಬದಿಯ ವ್ಯಾಪಾರದಲ್ಲಿ ನಿರತರಾಗಿದ್ದು, ಶೀಘ್ರದಲ್ಲಿಯೇ ಈ ಪ್ರಮಾಣ ಶೇ 2.5ಗೆ ಏರಿಕೆಯಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.