ನವದೆಹಲಿ (ಪಿಟಿಐ): ಅಮೃತಸರದ `ಸ್ವರ್ಣಮಂದಿರ~ದ್ಲ್ಲಲಿ ನಡೆದ `ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ನಿವೃತ್ತ ಲೆ.ಜ. ಕೆ.ಎಸ್. ಬ್ರಾರ್ ಹಾಗೂ ಇತರರ ರಕ್ಷಣೆ ಕುರಿತು ಪರಿಶೀಲನೆ ನಡೆಸಲು ಸರ್ಕಾರ ಉನ್ನತ ಮಟ್ಟದ ಸಭೆಯನ್ನು ಕರೆದಿದೆ.
ಕೇಂದ್ರ ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಸೇನಾ ಅಧಿಕಾರಿಗಳು, ಮಹಾರಾಷ್ಟ್ರ ಪೊಲೀಸರು ಮತ್ತಿತರರು ಭಾಗವಹಿಸಲಿದ್ದಾರೆ.
78ರ ಹರೆಯದ ಬ್ರಾರ್ ಮೇಲೆ ನಡೆದ ಹತ್ಯೆ ಯತ್ನದ ವೇಳೆ ಭಧ್ರತಾ ವೈಫಲ್ಯ ನಡೆದಿದೆಯೇ ಎನ್ನುವುದರ ಕುರಿತು ಸಹ ಪರಿಶೀಲನೆ ನಡೆಯಲಿದೆ.
ಇದೇ ವೇಳೆ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಭಾಗಿಯಾದ ಇತರ ಸೇನಾಧಿಕಾರಿಗಳ ಭದ್ರತೆ ಕುರಿತಂತೆಯೂ ಸಭೆಯಲ್ಲಿ ಪರಿಶೀಲಿಸಲಾಗುತ್ತದೆ.
ತಮ್ಮ ಪ್ರವಾಸದ ಕುರಿತು ಸ್ಥಳೀಯ ಸೇನಾಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು ಎಂದು ಬ್ರಾರ್ ತಿಳಿಸಿರುವ ಹಿನ್ನೆಲೆಯಲ್ಲಿ ಸಂಪರ್ಕ ಕೊರತೆಯೇ ಹತ್ಯೆ ಯತ್ನಕ್ಕೆ ಕಾರಣವಾಯಿತೇ ಎನ್ನುವುದರ ಕುರಿತೂ ವಿವರವಾದ ತನಿಖೆ ನಡೆಯಲಿದೆ. ಆದರೆ ಈ ಕುರಿತು ತಮಗೆ ಯಾವುದೇ ಮಾಹಿತಿ ಬಂದಿರಲಿಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.
ಈ ಮಧ್ಯೆ, ಬ್ರಾರ್ ಅವರಿಗೆ ನೀಡಲಾಗುತ್ತಿರುವ `ಝಡ್~ ಶ್ರೇಣಿಯ ಭದ್ರತೆಯನ್ನು ಮುಂದುವರಿಸಲು ಸರ್ಕಾರ ನಿರ್ಧರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.