ಜೋಧಪುರ್, (ಪಿಟಿಐ): ಪ್ರತಿಕೂಲ ಸಾಕ್ಷಿ ಹೇಳುವಂತೆ ಆಗ್ರಹಿಸಿ ಭನ್ವಾರಿ ದೇವಿ ಕೊಲೆ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆಗಳು ಬರುತ್ತಿವೆ, ಜೊತೆಗೆ ತಮಗೂ ಬೆದರಿಕೆಗಳು ಬರುತ್ತಿವೆ ಎಂದು ಪ್ರಕರಣದ ತನಿಖೆ ನಡೆಸುತ್ತಿದರುವ ಸಿಬಿಐ ಮಂಗಳವಾರ ರಾಜಸ್ಥಾನದ ಹೈಕೋರ್ಟ್ ಗಮನಕ್ಕೆ ತಂದಿದೆ.
ಭನ್ವಾರಿ ದೇವಿಯ ಪತಿ ಅಮರಚಂದ್ ಅವರು ದಾಖಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ಸಂದರ್ಭದಲ್ಲಿ, ಸಿಬಿಐ ಪರವಾಗಿ ಹಾಜರಾಗಿದ್ದ ವಕೀಲ ಪನ್ನೆ ಸಿಂಗ್ ಅವರು, ಹಲವಾರು ರಾಜಕಾರಣಿಗಳು ಭಾಗಿಯಾಗಿರುವ ಈ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐ ನಿಷ್ಪಕ್ಷಪಾತದಿಂದ ಮಾಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಒಟ್ಟು 17 ಜನ ಆರೋಪಿಗಳಲ್ಲಿ ಇದುವರೆಗೆ 16 ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಆ ಇನ್ನೊಬ್ಬ ಆರೋಪಿಯ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆದರೆ, ಪಕರಣದಲ್ಲಿ ಅತಿಗಣ್ಯರು ಭಾಗಿಯಾಗಿರುವ ಕಾರಣ ಸಿಬಿಐ ಮೇಲೆ ಸತತವಾಗಿ ಒತ್ತಡ ಹೇರಲಾಗುತ್ತಿದೆ. ಸಾಕ್ಷಿಗಳನ್ನೂ ಬೆದರಿಸಲಾಗುತ್ತಿದ್ದು, ಅದರಿಂದ ತನಿಖೆಯ ಪ್ರಗತಿಗೆ ಅಡ್ಡಿಯಾಗುತ್ತಿದೆ ಎಂದು ಸಿಂಗ್ ನ್ಯಾಯಲಯದ ಗಮನಕ್ಕೆ ತಂದರು.
ನಿರಂತರ ಒತ್ತಡದ ಕಾರಣ ಹಲವಾರು ಪ್ರಮುಖ ಸಾಕ್ಞಿಗಳು ಈಗ ಕಾಣದಾಗಿದ್ದಾರೆ ಎಂದೂ ಅವರು ನ್ಯಾಯಾಲಯಕ್ಕೆ ತಿಳಿಸಿದರು.
~ಕೇವಲ ಮಾತಿನ ಹೇಳಿಕೆಯಿಂದ ಪ್ರಯೋಜನವಿಲ್ಲ~ ಎಂದು ಅಭಿಪ್ರಾಯಪಟ್ಟ, ನ್ಯಾಯಮೂರ್ತಿಗಳಾದ ಗೋವಿಂದ್ ಮಾಥೂರ್ ಮತ್ತು ಕೆ.ಸಿ.ಜೋಷಿ ಅವರುಗಳ ಪೀಠ, ಈ ಕುರಿತಂತೆ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಿ, ಮುಂದಿನ ವಿಚಾರಣೆಯನ್ನು ಫೆ.27ಕ್ಕೆ ನಿಗದಿ ಪಡಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.