ADVERTISEMENT

ಭೂಷಣ್ ಮೇಲಿನ ಹಲ್ಲೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ/ಐಎಎನ್‌ಎಸ್): `ಈ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ, ವಿವೇಚನೆಯುಳ್ಳ ಭೂಷಣ್ ಅವರಂಥ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದೆ ಎಂದರೆ ಆಘಾತವಾಗುತ್ತಿದೆ. ಸಮಾಜದಲ್ಲಿ ಅಸಹನೆ ಯಾವ ರೀತಿಯಲ್ಲಿ ಹೊತ್ತಿ ಉರಿಯುತ್ತಿದೆ ಎನ್ನುವುದನ್ನು ಈ ಕೃತ್ಯ ತೋರಿಸುತ್ತದೆ. ಏನು ನಡೆಯಿತು ಎಂದು ನೀವೇ ಕಣ್ಣಾರೆ ನೋಡಿದ್ದೀರಿ. ಈ ಯುವಕರು ಬಹುಕಾಲ ಜೈಲಿನಲ್ಲಿ ಇರಬೇಕು~ ಎಂದು ಅಣ್ಣಾ ತಂಡದ ಸದಸ್ಯೆ ಕಿರಣ್ ಬೇಡಿ ಪ್ರತಿಕ್ರಿಯಿಸಿದ್ದಾರೆ.

ಹೇಯ ಕೃತ್ಯ: `ಈ ಹೇಯ ಕೃತ್ಯವನ್ನು ಖಂಡಿಸಲು ಪದಗಳೇ ಸಾಲುತ್ತಿಲ್ಲ. ಯುವಕರಿಗೆ ಕಠಿಣ ಶಿಕ್ಷೆ ಕೊಡಬೇಕು. ಅಲ್ಲದೇ ಇವರು ಯಾರು ಎನ್ನುವುದನ್ನು ಪತ್ತೆ ಹಚ್ಚಬೇಕು~ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.

ಸಂಬಂಧ ಇಲ್ಲ: ಇದೊಂದು ನಾಚಿಕೆಗೇಡಿನ ಕೃತ್ಯ, ದಾಳಿ ನಡೆಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಬಿಜೆಪಿ ಹೇಳಿದೆ.

ADVERTISEMENT

ದಾಳಿಕೋರರಲ್ಲಿ ಒಬ್ಬ ಬಿಜೆಪಿ ಯುವ ಘಟಕದ ಸದಸ್ಯ ಎಂಬ ಹೇಳಿಕೆಯನ್ನು ಪಕ್ಷದ ವಕ್ತಾರೆ ನಿರ್ಮಲಾ ಸೀತಾರಾಮನ್ ತಳ್ಳಿಹಾಕಿದ್ದಾರೆ. ದಾಳಿಕೋರರಿಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಈ ಘಟನೆಯಿಂದ ನಮಗೆ ಆಘಾತವಾಗಿದೆ. ಕಾರಣ ಏನೇ ಇರಲಿ ಅಂತಹ ಹಿಂಸಾಕೃತ್ಯಗಳನ್ನು ಈ ದೇಶ ಸಹಿಸುವುದಿಲ್ಲ ಎಂದಿದ್ದಾರೆ.

`ಪ್ರಶಾಂತ್ ಅವರ ಮೇಲೆ ನಡೆದಿರುವ ದೈಹಿಕ ಹಲ್ಲೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಭಾರತದ ಪ್ರಜಾಪ್ರಭುತ್ವದ ಮೇಲೆ ನಡೆದಿರುವ ದಾಳಿ. ಯಾರೊಬ್ಬರೂ ಇಂತಹ ಕೃತ್ಯಗಳ ಮೂಲಕ, ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ಹತ್ತಿಕ್ಕಲು ಸಾಧ್ಯವಿಲ್ಲ~ ಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಖಂಡಿಸಿದ್ದಾರೆ. ಅರುಣಾ ರಾಯ್, ಮೇಧಾ ಪಾಟ್ಕರ್ ಮುಂತಾದವರು ಸಹ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಅಣ್ಣಾ ಪ್ರತಿಕ್ರಿಯೆ
ರಾಳೇಗಣ ಸಿದ್ಧಿ:
ಪ್ರಶಾಂತ್ ಭೂಷಣ್ ಅವರ ಮೇಲೆ ನಡೆದ ಹಲ್ಲೆಯನ್ನು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ತೀವ್ರವಾಗಿ ಖಂಡಿಸಿದ್ದಾರೆ.

`ಕಾನೂನನ್ನು ಕೈಗೆ ತೆಗೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ನಾನು ಭೂಷಣ್ ಅವರ ಜತೆ ಮಾತನಾಡಿ, ಹಲ್ಲೆಯ ಕಾರಣವನ್ನು ತಿಳಿದುಕೊಳ್ಳುತ್ತೇನೆ~ ಎಂದಿದ್ದಾರೆ.

`ಭೂಷಣ್ ನಮ್ಮ ತಂಡದ ಸದಸ್ಯರು. ಅವರೊಂದಿಗೆ ವಿವರವಾಗಿ ಮಾತನಾಡಿದ ಬಳಿಕ ಮುಂದೇನು ಮಾಡಬೇಕು ಎಂಬ ತೀರ್ಮಾನ ತೆಗೆದುಕೊಳ್ಳುತ್ತೇವೆ~ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.