ನವದೆಹಲಿ, (ಪಿಟಿಐ): ಆಕರ್ಷಕ ಪರಿಹಾರ ಧನದ ಮೊತ್ತ ಮತ್ತು ಇತರ ಸೌಲಭ್ಯ ನೀಡಿಕೆಗಳನ್ನು ಒಳಗೊಂಡ ಬಹು ನಿರೀಕ್ಷಿತ ಭೂ ಸ್ವಾಧೀನ ಮತ್ತು ಪುನರ್ವಸತಿ ಮಸೂದೆಗೆ ಸೋಮವಾರ ಕೇಂದ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ದೇಶದ ಅನೇಕ ಭಾಗಗಳಲ್ಲಿ ಭೂ ಸ್ವಾಧೀನ ವಿರೋಧಿ ಚಳವಳಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತ್ವರಿತವಾಗಿ ರೂಪಿಸಲಾಗಿರುವ ಭೂಸ್ವಾಧೀನ ಮತ್ತು ಪುನರ್ವಸತಿ ಮಸೂದೆಯನ್ನು ಬುಧವಾರ ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ. ಭೂಸ್ವಾಧೀನ, ಪರಿಹಾರ ಮತ್ತು ಪುನರ್ವಸತಿ ಮಸೂದೆ 2011ರಲ್ಲಿ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಭೂಮಿ ಬೆಲೆಯ ನಾಲ್ಕುಪಟ್ಟು ಹೆಚ್ಚು ಪರಿಹಾರ ನೀಡಲು ಅವಕಾಶವಿದೆ.
ಯೋಜನೆಗೆ ಅಗತ್ಯವಿರುವ ಶೇಕಡಾ 80ರಷ್ಟು ಭೂಮಿಯನ್ನು ಸಂಬಂಧಪಟ್ಟ ಕಂಪೆನಿಗಳು ಸ್ವಾಧೀನಪಡಿಸಿಕೊಳ್ಳಲು ಉಳಿದ ಶೇಕಡಾ 20ರಷ್ಟು ಭೂಮಿಯನ್ನು ವಶಪಡಿಸಿಕೊಳ್ಳಲು ಸರ್ಕಾರ ನೆರವು ನೀಡಲು ಹೊಸ ಮಸೂದೆಯಲ್ಲಿ ಅವಕಾಶವಿದೆ.
ಭೂ ಮಾಲಿಕರಿಗೆ ಉತ್ತಮ ಪರಿಹಾರದ ಜತೆಗೆ ಒಂದು ವರ್ಷ ಪ್ರತಿ ಕುಟುಂಬಕ್ಕೆ ಮೂರು ಸಾವಿರ ರೂಪಾಯಿಗಳು ಮತ್ತು 20 ವರ್ಷಗಳವರೆಗೆ ಎರಡು ಸಾವಿರ ರೂಪಾಯಿಗಳನ್ನು ಭತ್ಯೆಯಾಗಿ ನೀಡಲು ಹಾಗೂ ಉದ್ಯೋಗ ನೀಡಲು ಮಸೂದೆಯಲ್ಲಿ ಅವಕಾಶವಿದೆ.
90 ನಿಮಿಷಗಳ ಕಾಲ ನಡೆದ ಸಂಪುಟ ಸಭೆಯಲ್ಲಿ ಈ ಮಸೂದೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಸಚಿವರಾದ ವೀರಪ್ಪ ಮೊಯಿಲಿ, ವಿಲಾಸ್ರಾವ್ ದೇಶಮುಖ್ ಮತ್ತು ವೀರಭದ್ರ ಸಿಂಗ್ ಅವರು ಮಸೂದೆಯ ಕೆಲವು ಅಂಶಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ. ಈ ಆಕ್ಷೇಪಗಳನ್ನು ಸ್ಥಾಯಿ ಸಮಿತಿಯ ಸಭೆಯಲ್ಲಿ ಬಗೆಹರಿಸಿಕೊಳ್ಳಲು ತೀರ್ಮಾನಿಸಲಾಯಿತು.
ಮಸೂದೆಗೆ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ಪಡೆಯುವ ಉದ್ದೇಶದಿಂದ ಸಚಿವ ರಮೇಶ್ ಅವರು ಹಿರಿಯ ಸಚಿವರಾದ ಪ್ರಣವ್ ಮುಖರ್ಜಿ, ಮೊಯಿಲಿ, ಅಂಬಿಕಾ ಸೋನಿ, ಶರದ್ ಪವಾರ್, ಎ. ಕೆ. ಅಂಟನಿ, ಪಿ. ಚಿದಂಬರಂ, ಕಪಿಲ್ ಶಿಬಲ್ ಮುಂತಾದವರ ಜತೆ ಚರ್ಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.